17 March, 2009

ವಿಚಾರ ಸಂಕಿರಣ ಎಂಬ ಹರಕೆ.....

ಕಾಲೇಜು ದಿನಗಳ ನಂತರ ಅಪ್ಪಟ ಸಾಹಿತ್ಯಿಕವಾದ, ಥಿಯರಿಟಿಕಲ್ ಆದ ಭಾಷಣ ಕೇಳಿರಲಿಲ್ಲ. ಆದರೆ ಇತ್ತೀಚೆಗೆ ಮಂಗಳೂರಿನಲ್ಲಿ ಕಿಟೆಲರ ಬಗ್ಗೆ ನಡೆದ ಅಂತಾರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಅನಿವಾರ್ಯ ಕಾರಣದಿಂದ ಹೊಗಲೇ ಬೇಕಾಯಿತು. ಶೈಕ್ಷಣಿಕ ಶಿಸ್ತಿನಿಂದ ದೂರವಾಗಿ ಅದಾಗಲೇ ೩ ವರ್ಷವಾಗುತ್ತಾ ಬಂತು. ಆದ್ದರಿಂದ ಇಂದು ಅಂಥ (ಬೋರಿಂಗ್)ಭಾಷಣ ಕೇಳುವಂಥ ತಾಳ್ಮೆಯಾಗಲೀ ಆಸಕ್ತಿಯಾಗಲೀ ಕಡಿಮೆಯಾಗುತ್ತಿದೆ.
ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಎಂದು ಹೆಸರಿದ್ದರೂ ಅಲ್ಲಿ ಯಾವ ಬಿಳಿ ಅಥವಾ ಕರಿ ತಲೆಗಳು ಕಾಣಿಸಲಿಲ್ಲ. (ವಿದೇಶಗಳಿಗೆ ಆಗಾಗ ಸರಕಾರಿ ಯಾ ಸಂಸ್ಥೆಗಳ ಖರ್ಚಿನಲ್ಲಿ ಭೇಟಿ ನೀಡುವ ನಮ್ಮ ವಿಧ್ವಾಂಸರಿಗೇ ಹಾಗೆ ಸಂಭೋಧಿಸಿರಬಹುದೇ?) ಸಂಯೋಜಕರು ಮತ್ತು ಭಾಷಣ ಕೊರೆಯುವವರ ಹೊರತಾಗಿ ನನ್ನಂತೆ ಅನಿವಾರ್ಯಕ್ಕೆ ಹೋದವರನ್ನು ಬಿಟ್ಟು ಆಸಕ್ತಿ ಇರುವ ಯಾವ ತಲೆಗಳೂ ಅಲ್ಲಿರಲಿಲ್ಲ.
ಕನ್ನಡದಲ್ಲಿ ಮೊದಲಿಗೆ ನಿಘಂಟು ರಚಿಸಿದವರು ಕಿಟೆಲ್ ಎಂದು ಸಣ್ಣ ತರಗತಿಯಿಂದಲೂ ಕಲಿತ, ಕೇಳಿದ ವಾಕ್ಯದ ಹೊರತಾಗಿ ಅಲ್ಲಿ ಮಂಡಿತವಾದ ಭಾಷಣದಿಂದೇನೂ ಎಫ್ಫೆಕ್ಟ್ ಆಗಲಿಲ್ಲ. ಕಾರಣ ಇಷ್ಟೇ- ಅಲ್ಲಿ ಬಂದವರೆಲ್ಲ ಶೈಕ್ಷಣಿಕ ಸಂಸ್ಥೆಗಳಲ್ಲಿ ಕೆಲಸ ಮಾಡುವ ದೊಡ್ಡ ಮಂಡೆಯವರು! ನಾಲ್ಕು ಪುಸ್ತಕಗಳನ್ನಿಟ್ಟು ತಯಾರಿಸಿದ ಪ್ರಬಂಧಗಳು. ಒಂದಿಬ್ಬರಂತೂ ಪೇಪರ್ ಪ್ರೆಸಂಟೇಶನ್ ಅಂದರೆ ಪಕ್ಕಾ ಪೇಪರ್ ಮುಂದಿಟ್ಟು ಸ್ಪೀಡಾಗಿ ಓದುತ್ತಿದ್ದರು. (ಸಣ್ಣ ತರಗತಿಯಲ್ಲಿ ಮೇಷ್ಟ್ರು ಒಬ್ಬೊಬ್ಬರನ್ನೇ ನಿಲ್ಲಿಸಿ ಪಾಠ ಓದಿಸುತ್ತಿದ್ದುದು ನೆನಪಾಯಿತು.) ಅನುಸ್ವಾರ, ವಿಸರ್ಗ, ಬಿಂದು ಹೀಗೆ ಹಲವು ಶಬ್ದಗಳು ಕೂತು ತೂಕಡಿಸುತ್ತಿದ್ದ ನನ್ನ ತಲೆಗೆ ಬಡಿಯುತ್ತಲೇ ಇತ್ತು. ವರ್ಷಗಟ್ಟಲೆ ಪಾಟ ಹೇಳಿಕೊಡುತ್ತಿದ್ದ ಮೇಷ್ಟ್ರುಗಳಿಗೆ ತಾವು ಓದಿ ಅಧ್ಯಯನ ಮಾಡಿದ ವಿಷಯದಲ್ಲಿ ನಾಲ್ಕು ಪಾಯಿಂಟ್ ಇಟ್ಟು ನೆರೆದಿದ್ದ ಹತ್ತು ಜನರ ಮುಂದೆ ಹೇಳಲು ಸಾಧ್ಯವಿಲ್ಲವೆ? ಬೇಸರವಾಯಿತು.
ಯಾಕೆ ಶಿಕ್ಷಣ ಸಂಸ್ಥೆಯವರು ಅಷ್ಟೆಲ್ಲಾ ಖರ್ಚುಮಾಡಿ ಅಂತಹ ಇಂಟರ್ ನ್ಯಾಶನಲ್ ಸೆಮಿನಾರುಗಳನ್ನು ಇಡುತ್ತರೋ? ಅಷ್ಟು ಹೊತ್ತು ಕೂತು ಊಟ ಮಾಡಿ ಬಂದ ನನಗೆ ಅರ್ಥವಾಗಲಿಲ್ಲ.
ಕನ್ನಡ ಸಾಹಿತ್ಯಕ್ಕೆ ಅಪಾರವದ ಕೊಡುಗೆ ನೀಡಿದ ಕಿಟೆಲರ ಬಗ್ಗೆ ಗೌರವ ಇದೆ.(ಆತನ ಕೊಡುಗೆಯ ಹಿಂದೆ ಸಾಕಷ್ಟು ಒತ್ತಡದ, ಆದೇಶದ ಅನಿವಾರ್ಯ ಕಾರಣಗಳಿದ್ದವು,) ಆದರೆ ಇಂದು ಇಂತಹ ಸೆಮಿನಾರ್ ಗಳನ್ನು ಮಾಡುವುದು ಎಷ್ಟು ಪ್ರಸ್ತುತ? ಕಿಟೆಲರ ಸಾಧನೆಯನ್ನು ನಾಲ್ಕು ಜನರಿಗೆ ತಲಪಿಸುವ ಕೆಲಸ, ಆತನ ಹಾದಿಯಲ್ಲಿ ಸಾಗುವ ಪ್ರಯತ್ನ ಹೀಗೆ ಹಲವಾರು ಉತ್ತರಗಳು ಬರಬಹುದು. ಆದರೆ ಅಂತರ್ಜಾಲ ಇರುವ ಇಂದಿನ ಸಂದರ್ಭದಲ್ಲಿ ಆ ಕೆಲಸಗಳೆಲ್ಲ ಕಾರ್ಯರೂಪಕ್ಕೆ ಖಂಡಿತಾ ಬರುವುದಿಲ್ಲ. ಅಲ್ಲದ ಅಲ್ಲಿಗೆ ಬಂದವರೆಲ್ಲ ಕೂದಲು ಬೆಳ್ಳಗಾದವರು, ಭಾಷಣ ಮಾಡಿದವರೂ ಅವರ ಹೊತ್ತಿಗೆ ಬಂದು ತಮ್ಮ ಕೆಲಸವಾದ ನಂತರ ಕಳಚಿಕೊಂಡವರೇ.
ಇಂತಹ ಕಾರ್ಯಕ್ರಮ ಮಾಡಲು ಶೈಕ್ಷಣಿಕ ಸಂಸ್ಥೆಗಳಿಗೆ ಒಂದಷ್ಟು ದುಡ್ಡು ಬರುತ್ತದೆ. ಬ್ಯಾಂಕ್ ನವರೂ ದಾನ ಮಾಡುತ್ತಾರೆ. ಅದರಲ್ಲಿ ಸ್ವಲ್ಪ ಹಣ ಹೀಗೆ ಖರ್ಚು ಮಾಡಿದರೆ, ಸ್ವಲ್ಪ ಈಗಾಗಲೇ ತುಂಬಿದ ಕಿಸೆಗಳಿಗೆ ಸೇರುತ್ತವೆ. ಮರುದಿನ ಪೇಪರಿನಲ್ಲಿ ಭಾಷಣ ಮಾಡಿದ, ಸಭಾ ಕಾರ್ಯಕ್ರಮದ ಫೋಟೋ, ಮ್ಯಾಟರ್ ನೊಂದಿಗೆ ಮುಕ್ತಾಯವಾಗುತ್ತದೆ.
ನಮ್ಮ ಸಮಾಜದಲ್ಲಿ ಅದೆಷ್ಟೋ ವಿದ್ಯಾರ್ಥಿಗಳು ಓದಲು ದುಡ್ಡಿಗಾಗಿ ಕಷ್ಟಪಡುತ್ತರೋ, ಲೆಕ್ಕ ಸಿಕ್ಕದು. ಅಂತಹ ವಿದಾರ್ಥಿಗಳಿಗಾದರು ಈ ದುಡ್ಡನ್ನು(ಕಿಟೆಲರ ಹೆಸರಿನಲ್ಲಿ) ನೀಡಿದರೆ ಅವರು ಮನಪೂರ್ವಕವಾಗಿ ನಮಿಸಬಹುದು. ಕುತೂಹಲಕ್ಕಾದರೂ ಕಿಟೆಲರ ಸಾಧನೆಯನ್ನು ಗುರುತಿಸುತ್ತಿದ್ದರೋ... ಆದರೇನು ಮಾಡುವುದು ಇದನ್ನೆಲ್ಲ ಹೇಳುವವರಾರು? ಹೇಳಿದರೆ ಮಾಡುವವರಾರು?
ಕೊನೆಯಲ್ಲಿ ಮುಖ್ಯಾಂಶ:-ಅಷ್ಟು ವಯಸ್ಸಾದರೂ, ತನ್ನ ಸಣ್ಣ ದೇಹದ ಪುಟು ಪುಟು ಹೆಜ್ಜೆಯಿಡುತ್ತಾ ಸ್ಟೇಜಿಗೆ ಬಂದು ಮೈಕ್ ಮುಂದೆ ನಿಂತು ಭಾಷಣ ಮಾಡಿದ ಶ್ರೀನಿವಾಸ ಹಾವನೂರರ ಅಗಾಧ ಪಾಂಡಿತ್ಯಕ್ಕೂ ಚುರುಕು ನಡಿಗೆಗೂ ಬೆರಗಾದೆ!!!

13 March, 2009

ಅಜ್ಜನ ಸಾವು!

ಬರವಣಿಗೆಯಲ್ಲಿ ಪೀಠಿಕೆ, ಉಪಸಂಹಾರ ಎಂಬೆಲ್ಲ ಶಿಸ್ತು ಅಳವಡಿಕೆ ಸದ್ಯದ ಈ ಬರಹದಲ್ಲಿ ಅನಗತ್ಯ. ನೇರವಾಗಿ ವಿಷಯಕ್ಕೇ ಬರುತ್ತೇನೆ.
ಜೋಗಿಯವರ ನದಿಯ ನೆನಪಿನ ಹಂಗು, ರಾಯಭಾಗದ ರಹಸ್ಯ ರಾತ್ರಿ, ಕಾಡು ಹಾದಿಯ ಕತೆಗಳು ಮೊದಲಾದ ಕೃತಿಗಳನ್ನು ಓದುತ್ತಿರುವಾಗ ಇದೆಲ್ಲ ಸಾದ್ಯವಾ? ವಾಸ್ತವವಾ? ಹೀಗೂ ಉಂಟೇ? ಎಂಬೆಲ್ಲ ಪ್ರಶ್ನೆಗಳು ಕಾದುತ್ತಿತ್ತು.
ಕೆಲವು ಸ್ತ್ರೀ, ಪುರುಷ ಪಾತ್ರಗಳೆಲ್ಲ ಇದ್ದಕ್ಕಿದ್ದಂತೆ ನಾಪತ್ತೆಯಾಗುವುದೋ, ನಿಗೂಢವಾಗಿ ಸಾಯುವುದೋ, ಸತ್ತು ಭೂತವೋ, ದೆವ್ವವೋ ಆಗಿ ಕಾಡುತ್ತದೆ ಎಂದು ಜನ ನಂಬುವುದು_ ಇದೆಲ್ಲ ನನಗೆ ಹೊಸ ಜಗತ್ತಿನಂತೆ, ವಿಚಿತ್ರವಾಗಿ ಕಾಣಿಸುತ್ತಿತ್ತು.
ಹಾಗೇ ಜೋಗಿಯವರು ತಾವು ಕಂಡ ಹಳ್ಳಿಯ ಬದುಕಿನ ಸೂಕ್ಷ್ಮತೆಗಳನ್ನು ಬರವಣಿಗೆಯಲ್ಲಿ ವ್ಯಕ್ತಪಡಿಸುವ ಅದ್ಭುತ ಶೈಲಿಗೂ ಬೆರಗಾಗುತ್ತಿದ್ದೆ.
ನಮ್ಮೂರಲ್ಲೂ ಇಂಥಾ ಕತೆಗಳಿಲ್ಲವೇ? ಇದ್ದರೆ ಯಾಕೆ ನನ್ನ ಅನುಭವಕ್ಕೆ ಬರಲಿಲ್ಲ? ನನ್ಯಾಕೆ ಗಮನಿಸಲಿಲ್ಲ? ಎಂದೆಲ್ಲ ಕಥಾಸಂಕಲನ ಓದಿದ ಮೇಲೆ ನನ್ನನ್ನು ಕಾಡಲು ಶುರುವಾಯಿತು. ಶಾಲೆ, ಕಾಲೇಜು, ಪ್ರೀತಿ, ಮದುವೆ, ಸಂಸಾರ ಎಂದು ನಾನು ನನ್ನ ವ್ಯೂಹದೊಳಗೇ ಸಾಗುತ್ತಿದ್ದೆ. ನನ್ನ ಗಮನಕ್ಕೆ ಬಂದರೂ ಅದು ಮುಖ್ಯವಾಗಲಿಲ್ಲ.
ಈಗ ಊರಿಗೆ ಬಂದು ೧ ವಾರದೊಳಗೆ ೨ ಆತ್ಮಹತ್ಯಾ ಪ್ರಕರಣ ಕೇಳಿದೆ. ಅದರಲ್ಲಿ ಒಂದಂತೂ ಬಹಳ ವಿಚಿತ್ರವಾಗಿದೆ, ನಿಮಗೂ ಕುತೂಹಲವೆನಿಸಬಹುದು.
ಸುಮಾರು ಎಪ್ಪತ್ತು ವರ್ಷ ಮೀರಿದೆ ಅಂದರೆ ಅಜ್ಜನಲ್ಲದೆ ಹುಡುಗನಾಗಲು ಸಾಧ್ಯವೇ? ಮಾಟ, ಮಂತ್ರ ಮಾಡುತ್ತಾ, ಇದ್ದ ತೋಟ ನೋಡಿಕೊಂಡು ಮಗ ಸೊಸೆ ಮೊಮ್ಮಕ್ಕಳ ಜೊತೆ (ಹಾಯಾಗಿ ಎಂದು ಹೇಳಲಾರೆ) ಇದ್ದವರು. ಮಾಟ ಮಾಡಿಸುವುದರಿಂದಾಗಿ ನಮ್ಮ ಊರಲ್ಲಿ ಆ ವ್ಯಕ್ತಿ ತಕ್ಕ ಮಟ್ಟಿಗೆ ಫೇಮಸ್!
ಸಾಯೋ ಗಂಟೆ ಗಳಿಗೆ ಸರಿಯಾಗಿದ್ದರೆ ಡೈರೆಕ್ಟ್ ಸ್ವರ್ಗ ಸೇರಬಹುದೆಂದು ಆ ದಿನ ಪಂಚಾಂಗ ನೋಡುತ್ತಿದ್ದರಂತೆ. (ದಿನ ಗಂಟೆ ಮುಹೂರ್ತ ನೋಡಿ ಸಿಸೇರಿಯನ್ ಮಾಡಿಸುವಂತೆ!) ಹುಟ್ಟಲು ಮಾತ್ರವಲ್ಲ ಸಾಯಲೂ ದಿನ ನೋಡುತ್ತಾರೆಂದಾಯಿತು. ಸಾಯೋ ಕೆಲ ದಿನ ಮೊದಲು ಬಿದಿರು ಕಡಿಸಿ, ಮಣ್ಣಿನ ಹೊಸ ಅಳಗೆ(ಪಾತ್ರ), ಹೊಸ ಪಂಚೆ ಎಲ್ಲ ತಂದಿಟ್ಟಿದ್ದರಂತೆ.(ಇನ್ನು ಮಗನಿಗೇನೂ ಕೆಲಸವಿಲ್ಲ!) ಹಾಗೆ ಯಾರಲ್ಲೋ ಚಟ್ಟಕ್ಕಾಗಿ ಮರ ಕಡ್ಪೆರ ಜನ ತಿಕ್ವೆರಾ(ಮರ ಕಡುಹಿಸಲು ಜನ ಸಿಗಬಹುದೇ) ಅಂತಲೂ ವಿಚಾರಿಸುತ್ತಿದ್ದರಂತೆ.
ಆ ರಾಮ ಸತ್ತದ್ದೂ ನೀರಿನಿಂದ ಈ ರಾಮ ಸಾಯುವುದೂ ನೀರಿನಿಂದಲೇ ಎಂದು ತನ್ನನ್ನು ದೈವತ್ವಕ್ಕೇರಿಸಿದ ಮಾತು ಇತ್ತಂತೆ. ಆತ್ಮಹತ್ಯೆ ಮಾಡುವ ಮೊದಲು ಎಲ್ಲ ಪೂರ್ವ ತಯಾರಿ ಮಾಡಿದ್ದ ಅಜ್ಜ.
ಈ ಎಲ್ಲ ಮುನ್ಸೂಚನೆ ಕೊಟ್ಟರೂ ಮನೆಯವರಿಗೆ ಆತ್ಮಹತ್ಯೆಯ ವಾಸನೆ ಬಡಿಯಲಿಲ್ಲವೋ? ಬಡಿದರೂ ಮೂಗು, ಬಾಯಿ ಮುಚ್ಚಿ ಕುಳಿತಿದ್ದರೋ? ಗೊತ್ತಿಲ್ಲ.
ಕೆರೆಯ ಬುಡದಲ್ಲಿ ಚಪ್ಪಲಿ, ಕನ್ನಡಕ ಇಟ್ಟು ಅಜ್ಜ ಡೈ(ವ್) ಹೊಡೆದೇ ಬಿಟ್ಟರು.
ಈಗ ನಮ್ಮೂರಲ್ಲಿ ಕೆರೆಗೆ ಹೋದ ಅಜ್ಜ ಕಾಲು ಜಾರಿ ಬಿದ್ದರು ಎಂದು ಆಡಿಕೊಳ್ಳುತ್ತದ್ದಾರೆ.
ಅಂತೆಯೇ ಮಾಟ ಮಂತ್ರ ಮಾಡುತ್ತಿದ್ದಾಗ ಅವರ ಬಳಿಗೆ ಬಂದ ಹೆಂಗಸರನ್ನು ಅಜ್ಜ ತಂತ್ರ ಮಾಡಿ......(ಯೋಚಿಸಿ) ಎಂಬ ಸಣ್ಣ ಧ್ವನಿಯೂ ಕೇಳಿ ಬರುತ್ತಿದೆ.
ಅಷ್ಟಕ್ಕೂ ಅಜ್ಜ ಸಾಯುವುದಕ್ಕಿದ್ದ ಕಾರಣ?
ಜೋಗಿಯವರ ಕೆಲವು ಕತೆಗಳಂತೆ ನಿಗೂಢವೂ ಅಸ್ಪಷ್ಟವೂ ಆಗಿದೆ.
ಅಜ್ಜ ನೋಡಿದ ಪಂಚಾಗ ಸರಿಯಿದ್ದು ಗಂಟೆ ಘಳಿಗೆ ಎಲ್ಲ ಸ್ವರ್ಗಮುಖಿಯಾಗಿದ್ದರೆ ಸುಖಿಯಾಗಿರಬಹುದು, ದೆವ್ವವಾಗಿ ಬಂದು ಕಾಡಲಾರ ಎಂಬ ನಂಬಿಕೆ!

04 March, 2009

ಕೊಳಚೆ ನಾಯಿ ಕೋಟಿಪತಿ_ ಮೂಡಿಸಿದ ಪ್ರಶ್ನೆಗಳು!

ಆಸ್ಕರ್ ಪ್ರಶಸ್ತಿ ಬಂದಾಗಿನಿಂದ ಕೊಳಚೆ ನಾಯಿ ಕೋಟಿಪತಿಗೆ ಬಂದಷ್ಟು ಕಾಮೆಂಟ್ ಗಳು ಇನ್ಯಾವುದೇ ಸಿನೆಮಾಕ್ಕೂ ಬಂದಿರಲಿಕ್ಕಿಲ್ಲ. ಅಷ್ಟು ಸಾಲದೆಂಬಂತೆ ನನ್ನದೂ ಎರಡು ತಕರಾರಿದೆ.
ಸ್ಲಂಡಾಗ್-ಎಂಟು ಆಸ್ಕರ್ ಬಾಚಿಕೊಳ್ಳುವಂತಾ ಸಿನಿಮಾವೇನೂ ಅಲ್ಲ. ಅದಕ್ಕಿಂತ ಈ ಮೊದಲು ಆಸ್ಕರ್ ಬುಡದವರೆಗೆ ಹೋಗಿ ಬಂದ ನಮ್ಮ ಆಮೀರ್ ಖಾನ್ ನಟನೆಯ ಲಗಾನ್ ‘ ತಾರೇ ಜಮೀನ್ ಪರ್ ನೂರು ಪಾಲು ಚೆನ್ನಾಗಿದ್ದುವು. ಇದರ ನಿರ್ದೇಶಕರು, ತಯಾರಕರೆಲ್ಲ ಭಾರತೀಯರು ಅನ್ನುವ ಕಾರಣಕ್ಕೋ, ಆಸ್ಕರ್ ವಿತರಕರಿಗೆ ಸಿನಿಮಾ ಅರ್ಥವಾಗಲಿಲ್ಲವೋ ಅಥವಾ ಆಮೀರ್ ಖಾನರ ದುರದೃಷ್ಟವೋ ಪ್ರಶಸ್ತಿ ದೊರಕಲಿಲ್ಲ.
ಎ.ಆರ್ ರೆಹಮಾನರು ಅದ್ಭುತ ಸಂಗೀತ ನಿರ್ದೇಶಕರು. ಅದರಲ್ಲಿ ಎರಡು ಮಾತಿಲ್ಲ. ಆಸ್ಕರ್ ಪ್ರಶಸ್ತಿ ಅವರಿಗೆ ಲಭಿಸಿದ್ದಕ್ಕೆ ನೂರು ಪ್ರಣಾಮಗಳು. ಆದರೆ ಜೈಹೋ ಅಂಥಾ ಅದ್ಭುತ ಸಂಗೀತದ ಹಾಡೇನೂ ಅಲ್ಲ. ಅದಕ್ಕಿಂತ ಎಷ್ಟೋ ಉತ್ತಮ ಹಾಡುಗಳನ್ನು ರೆಹಮಾನ್ ಸಾಹೇಬರು ಈ ಮೊದಲು ನೀಡಿದ್ದಾರೆ. ಅಲ್ಲದೆ ಭಾರತೀಯ ಸಿಮಿಮಾ ರಂಗದಲ್ಲೂ ಬಹಳ ಉತ್ತಮ ಹಾಡುಗಳಿವೆ. ಆದರೇನು ಮಾಡುವುದು ಈ ಮೊದಲು ಬಂದಂತಹ ನಮ್ಮ ಉತ್ತಮ ಸಂಗೀತದ ಹಾಡುಗಳು ಆಸ್ಕರ್ ವಿತರಕರ ಕಿವಿಗೆ ಇಂಪಾಗಿ ಕೇಳಿಸಲಿಲ್ಲವೇನೋ! ಅಥವಾ ಸ್ಲಂ ಡಾಗ್ ಗೆ ಆಸ್ಕರ್ ಬಂದ ಕಾರಣ ಅದರ ಹಾಡಿಗೂ ಕೊಟ್ಟರೇನೋ.
ಅದೇನೇ ಇರಲಿ, ಸ್ಲಂ ಡಾಗ್-ಮಿಲೆನೇರ್ ಮಾತ್ರ ನಮ್ಮಲ್ಲಿ ಕೆಲವು ಚಿಂತಿಸುವಂತಹ ಅಂಶಗಳನ್ನು ಹಾಗೇ ಬಿತ್ತಿ ಹೋಗಿವೆ ಎಂಬುದು ಮಾತ್ರ ಸತ್ಯ.
ಆತ ಕ್ರಿಶ್ಚನ್ ಈತ ಮುಸ್ಲಿಂ ಎಂಬ ಯಾವ ಧರ್ಮದ ನೆಲೆಯಿಂದಲೂ ಈ ಮಾತುಗಳನ್ನ ಬರೆಯುತ್ತಿಲ್ಲ.ಆದರೆ ಇಂಥಾ ಸಿನೆಮಾ ಯಾಕೆ ಇಲ್ಲಿಯವರೆಗೆ ಒಬ್ಬ ಭಾರತೀಯ ನಿರ್ದೇಶಿಸಲಿಲ್ಲ?
ಭಾರತೀಯ ಖಂಡಿತಾ ಇಂತ ಸಿನೆಮಾ ನಿರ್ದೇಶಿಸಲಾರ. ಯಾಕೆಂದರೆ ಆತನಿಗೆ ನಮ್ಮ ದೇಶದ ಮೇಲೆ ಅಭಿಮಾನವಿದೆ. ತನ್ನ ದೇಶದ ಕೊಳಕು-ಹುಳುಕನ್ನು ಒಬ್ಬ ಭಾರತೀಯ ಸಿನೆಮಾದ ಮೂಲಕ ಲೋಕಕ್ಕೆ ಸಾರಲಾರ ಅನ್ನುತ್ತೀರಾ?
ಖಂಡಿತಾ ಇಲ್ಲ. ದುಡ್ಡು ಸಿಗುವುದಾದರೆ! ದೇಶ ಭಕ್ತಿ, ಆತ್ಮ ಸಾಕ್ಷಿ ಎಲ್ಲವೂ ಆಮೇಲೆ. ದುಡ್ಡಿನ ಮುಂದೆ ಇದೆಲ್ಲವೂ ಗೌಣ ಅಥವಾ ಸೆಕೆಂಡರಿ.
ಹಾಗಾದರೆ ನಮ್ಮ ದೇಶದ ಕತೆ ನಮ್ಮ ದೇಶದ ಸಿನೆಮಾ ರಂಗದವರ ಕಣ್ಣಿಗೆ ಯಾಕೆ ಬೀಳಲಿಲ್ಲ? ಯಾಕೆಂದರೆ ಭಾರತವೇ ಹಾಗಿದೆ. ನಮಗೆ ನಮ್ಮ ದೇಶದ ಕೊಳಕು ಹುಳಕಿನಲ್ಲಿ ಬದುಕು ಅಭ್ಯಾಸವಾಗಿದೆ. ಹಾಗಾಗಿ ಅಲ್ಲಿ ಕಣ್ಣಿಗೆ ಕತೆ ಕಾಣಲು ಹೇಗೆ ಸಾಧ್ಯ? ಆದ್ದರಿಂದಲೇ ಒಬ್ಬ ವಿದೇಶಿಗನಿಗೆ ಇದು ಸಾಧ್ಯವಾಯಿತು.
ಸಿನೆಮಾ ೮೦೦ ಕೋಟಿ ರೂ ಲಾಭಗಳಿಸಿತು. ಅದರಿಂದ ನಮ್ಮ ಸ್ಲಂಗಳಿಗೇನು ಲಭಿಸಿತು? ಎಂಬ ಪುಕಾರು ಬಂತು. ಒಪ್ಪತಕ್ಕ ಮಾತೇ. ಆದರೆ ವಿದೇಶಿಗರು ನಮ್ಮ ಸ್ಲಂಗಳನ್ನು ಉದ್ದಾರ ಮಾಡುವುದಕ್ಕಿಂತಲೂ ಮೊದಲು ನಾವೇನು ಮಾಡುದೆವು? ಸಿನೆಮಾ ನೋಡಿದ ಮೇಲಾದರೂ ಸ್ಲಂಗಳ ಸ್ಥಿತಿ ಏನಾಯಿತು? ನಮ್ಮವರು ಏನು ಮಾಡಿದರು?
ಉತ್ತರ ಪ್ರತಿಭಟನೆ! ಯಾಕೆ? ಯಾವುದರ ವಿರುದ್ದ? ಯಾವ ಉದ್ದೇಶಕ್ಕಾಗಿ? ಇದ್ಯಾವುದಕ್ಕೂ ನಮ್ಮಲ್ಲಿ ಉತ್ತರವಿಲ್ಲ.
ಸಿನೆಮ ಫೇಮಸ್ ಆದ ಮೇಲಂತೂ ನಮ್ಮ ಸ್ಲಂಗಳು ಪ್ರವಾಸಿ ತಾಣವಾಯಿತು ಎಂಬ ಪುಕಾರು.
ಖಂಡಿತಾ ನಮ್ಮ ದೇಶ ಇದಕ್ಕೆ ಪ್ರವಸಿ ತಾಣವಾಗುವುದು ಬೇಡ. ಅಷ್ಟಕ್ಕೂ ಪ್ರವಾಸಿ ತಾಣವನ್ನಾಗಿ ಮಾಡುವವರು ಯಾರು? ನಮ್ಮವರಲ್ಲವೇ? ಪ್ರವಾಸಿ ತಾಣವಾಗಬೇಕಾದ ಅದೆಷ್ಟೋ ಉತ್ತಮ ಜಾಗಗಳಲ್ಲಿ ಪ್ರವಾಸಿಗರು ಹೋಗಿ ಉಳಕೊಳ್ಳುಲು ವ್ಯವಸ್ಥೆಗಳಿಲ್ಲದೆ ಪರದಾಡುವ ಸ್ಥಿತಿ! ಇದೇ ನಮ್ಮ ದೇಶದ ದುರಂತ ಅನ್ನುವುದು.
ಇನ್ನಾದರೂ ಕೊಳಚೆ ನಾಯಿ ಕೋಟಿಪತಿಯ ಬಗ್ಗೆ ಪುಕಾರು, ತಕರಾರುಗಳನ್ನು ನಿಲ್ಲಸಿ ನಮ್ಮ ದೇಶದ ಉದ್ಧಾರವನ್ನು ಹೇಗೆ ಮಾಡುವುದೆಂದು ನಿರ್ಧರಿಸಿ ಅದರತ್ತ ಸಾಗೋಣವೇ?
ಹಾಗಾದರೆ ಇದನ್ನು ನಿರ್ಧರಿಸುವರಾರು? ಕಾರ್‍ಯರೂಪಕ್ಕೆ ತರುವವರಾರು? ನಾನಾ? ನೀವಾ? ಸರಕಾರದವರಾ? ದೇಶದಲ್ಲಿರುವವರೆಲ್ಲರಾ?
ಮತ್ತೆ ನನ್ನತ್ತ ಕೈ ತೋರಿಸುವ ಬದಲು ನಿಮ್ಮತ್ತ ಕೈ ತೋರಿಸಿ ಪ್ರಶ್ನೆಯಿಂದಲೇ ಮುಗಿಸಬೇಕಾ???

01 March, 2009

ಸರ್ಕಸ್ ನೋಡಿ ತಲೆ ಹಾಳಾಗಿ...

ಕ್ಷಮಿಸಿ, ಇಷ್ಟು ತಡವಾಗಿ ಕನ್ನಡದ ಸರ್ಕಸ್ ಸಿನೆಮಾದ ಬಗ್ಗೆ ಬರೆಯುತ್ತಿರುವುದಕ್ಕೆ ಜೊತೆಗೆ ಬೈಯುತ್ತಿರುವುದಕ್ಕೆ!
ಖಂಡಿತವಾಗಿಯೂ ಆ ಸಿನೆಮಾದ ಡೈರೆಕ್ಟರ್ ದಯಾಲ್ ಪದ್ಮನಾಭನ್, ಪ್ರೊಡ್ಯೂಸರ್, ಗೊಲ್ಡನ್ ಸ್ಟಾರ್ ಗಣೇಶ್ ಯಾರನ್ನೂ ಕ್ಷಮಿಸೊಲ್ಲ. ಅಷ್ಟಕ್ಕೂ ಕ್ಷಮಿಸೋಕ್ಕೆ ನಾನು ಯಾರು ಅಂತ ಕೇಳಬೇಡಿ! ಗಣೇಶ್ ಬಗ್ಗೆ ಇದ್ದ ಸಣ್ಣ ಅಭಿಮಾನವೂ ಇಲ್ಲದಾಯಿತು.
ಸತ್ಯಕ್ಕೂ ಈ ಸಿನೆಮಾ ತಯಾರಿಸಿದ ಉದ್ದೇಶವೇನು ನನಗಂತೂ ಅರ್ಥವಾಗಿಲ್ಲ. ನಿಮಗೇನಾದರೂ ಅರ್ಥವಾದರೆ ತಿಳಿಸಿ.
ಸಿನೆಮಾ ನೋಡಿ ಪ್ರೇಕ್ಷಕರ ಮನಸ್ಸು ಉಲ್ಲಾಸದಾಯಕವಾಗಬೇಕು ಇಲ್ಲವೇ ಮನ ಕಾಡುವಂತಿರಬೇಕು, ಸಿನೆಮಾ ನೋಡಿದ ತ್ರಪ್ತಿಯಾದರೂ ಸಿಗಬೇಕು ಅದು ಬಿಟ್ಟು ಸಿನೆಮಾ ನೋಡಿ ತಲೆ ಹಾಳಾಗುವಂತಿದ್ದರೆ?
ಜೀವನದಲ್ಲಿ ಅದೆಷ್ಟೋ ಸಮಯವನ್ನು ನಿದ್ದೆ ಮಾಡಿಯೋ, ಕಾಡು ಹರಟೆ ಹೊಡೆದೂ ವ್ಯರ್ಥ ಮಾಡಿದ್ದೇನೆ. ಅದಕ್ಕೆ ಅಂಥಾ ಬೇಸರವೇನೂ ಇಲ್ಲ. ಆದರೆ ಸರ್ಕಸ್ ಸಿನೆಮಾ ನೋಡಿ ೩ ಗಂಟೆ ಹಾಳಾಯಿತಲ್ಲ ಅನ್ನೋದು ಅದಕ್ಕಿಂತ ಹೆಚ್ಚಿನ ಬೇಸರ!
ನಮ್ಮ ಕನ್ನಡ ಸಿನೆಮಾದವರು ಅದ್ಯಾಕೆ ಇಂಥ ಸಿನೆಮಾ ತಯಾರಿಸುತ್ತಾರೋ ನಾ ಕಾಣೆ. ಅಷ್ಟು ದುಡ್ಡು ಹೆಚ್ಚಾಗಿದ್ದರೆ ಬಡವರಿಗೆ ದಾನ ಮಾಡಿದ್ದರೆ ಅವರಾದರೂ ಈ ಪ್ರೊಡ್ಯೂಸರ್ ಗಳನ್ನು ಜೀವನ ಪೂರ್ತಿ ಸ್ಮರಿಸುತ್ತಿದ್ದರೇನೋ. ಸಿನೆಮಾ ನೋಡಿ ಪ್ರೇಕ್ಷಕರ ಬೈಗುಳಗಳಿಗಿಂತ! ಶ್ರೇಷ್ಟ ಕೆಲಸ ಮಾಡುದ ಪುಣ್ಯವಾದರೂ ಬರುತ್ತಿತ್ತು.
ದೇಶ ಭಕ್ತಿ, ಉಗ್ರಗಾಮಿಗಳ ಬಗ್ಗೆ ಅದೆಷ್ಟೋ ಸಿನೆಮಾಗಳು ಬಂದಿವೆ. ಆದರೆ ಇಂಥಾ ಸಿನೆಮಾ ಯಾವ ಭಾಷೆಯಲ್ಲೂ ಬಂದಿರಲಿಕ್ಕಿಲ್ಲವೇನೋ.
ಇತ್ತೀಚೆಗೆ ಬಂದ ಎ ವೆಡ್ನಸ್ಡೇ, ಮುಂಬೈ ಮೇರಿ ಜಾನ್ ಎಂತ ಅದ್ಭುತ ಸಿನೆಮಾಗಳು. ಕನ್ನಡದಲ್ಲಿ ಯಾಕೆ ಇಂಥಾ ಸಿನೆಮಾಗಳು ಬರುವುದಿಲ್ಲ?
ಒಂದೊಮ್ಮೆ ನಮ್ಮ ಕನ್ನಡದವರೇನಾದರೂ ಅಂಥದ್ದೇ ಸಿನಮಾ ತಯಾರಿಸಬೇಕೆಂದು ಹೊರಟರೆ ಹೇಗಿರುತ್ತಿತ್ತು? ಅನಗತ್ಯ ಹಾಡುಗಳು, ಹಾಡಿಗೋಸ್ಕರ ಕುಣಿತ, ಕುಣಿತಕ್ಕಾಗಿ ಲವ್ ಸ್ಟೋರಿ. ಒಟ್ಟಿನಲ್ಲಿ ಕಲಸು ಮೇಲೋಗರ!ಖಂಡಿತವಾಗಿಯೂ ಅಂತಹ ಉತ್ತಮ ಚಿತ್ರಗಳನ್ನು ತಯಾರಿಸಲು ಸಾಧ್ಯವಿಲ್ಲ!
ಕನ್ನಡ ಸಿನೆಮಾದವರು ಹಿಂದಿಯದ್ದನ್ನೇ ತಥಾವತ್ತಾಗಿ ಕೋಪಿ ಹೊಡೆಯಿರಿ ಎಂದು ಹೇಳುತ್ತಿಲ್ಲ. ನಮ್ಮ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ರವರ ಸಂಗೀತದಂತೆ! (ಹೀಗೆ ಬರೆದದ್ದು ಗೊತ್ತಾದರೆ ಗುರ್ ಅಂದಾರು.) ಕೋಪಿ ಹೊಡೆದರೂ ಗೊತ್ತಾಗದಂತಿರಬೇಕು.
ಇನ್ನಾದರೂ ನಮ್ಮ ಚಿತ್ರರಂಗದವರು ಪರಭಾಷಾ ಸಿನೆಮಾದ ಐಡಿಯಾಗಳನ್ನು ಸ್ವೀಕರಿಸಿ ಉತ್ತಮ ಸಿನೆಮಾ ತಯಾರಿಸಲಿ ಎಂಬುದೇ ನನ್ನ ವಿನಯಪೂರ್ವಕವಾದ ವಿನಂತಿ.
ಇನ್ನು ಸರ್ಕಸ್ ಸಿನೆಮಾದ ಕತೆಯನ್ನಂತೂ ಬರೆಯೋದಿಲ್ಲ. ಅದನ್ನ ನೋಡಿ ನನ್ನ ತಲೆಯಂತೂ ಹಾಳಾಗಿದೆ. ಇನ್ನು ನನ್ನ ಈ ಬರವಣಿಗೆಯಲ್ಲಿ ಕತೆ ಬರೆದು ನಿಮ್ಮ ತಲೆ ಹಾಳು ಮಾಡಿದ ಅಪವಾದ ನನಗೆ ಬರುವು ಇಷ್ಟವಿಲ್ಲ.
ಒಟ್ಟಿನಲ್ಲಿ ಗಣೇಶನನ್ನು ಮುಂದಿನ ಒಲಿಂಪಿಕ್ ಓಟಕ್ಕೆ ಈಗಲೇ ನಿರ್ದೇಶಕರು ತಯಾರುಗೊಳಿಸಿದಂತೆ ಕಾಣುತ್ತದೆ . ರೈಲಿನ ವೇಗಕ್ಕಿಂತ ಸ್ಪೀಡಿನಲ್ಲಿ! ಚಿನ್ನವೋ ಬೆಳ್ಳಿ ಪದಕವೋ ಬಂದರೆ ಅನುಮಾನವಿಲ್ಲ. ಆದ್ದರಿಂದ ಸಿನೆಮಾ ನಿರ್ದೇಶಕರಿಗೆ, ಪ್ರೊಡ್ಯೂಸರಿಗೆ ಹಾಗೂ ಗಣೇಶ್ ಗೆ ಆಲ್ ದಿ ಬೆಸ್ಟ...!!!