31 January, 2009

ಪುಕ್ಕಟೆ ಪುರಾಣ


ಪುಕ್ಕಟೆ ಸಿಗುತ್ತದೆಯೆಂದರೆ ಇಂಡಿಯಾದಲ್ಲಿ ಜನ ಏನನ್ನು ಸ್ವೀಕರಿಸಲೂ ಸಿದ್ಧ. ಅದಕ್ಕೆ ನಾನೂ ಹೊರತಲ್ಲ!
ಆಗ ಹೆಗಲಿಗೆ ಮಣ ಭಾರದ ಚೀಲ ಏರಿಸಿ, ಕಾಲು ಹಾಕಲೂ ಆಗದ ಬಸ್ಸಲ್ಲಿ ೧ ಗಂಟೆ ಪ್ರಯಾಣಿಸಿ ಶಾಲೆಗೆ ಹೋಗುತ್ತಿದ್ದ ಕಾಲ. ಶಾಲೆ, ಮನೆ ಎರಡೇ. ಬೇರೆ ಪ್ರಪಂಚದ ಅರಿವು ಕಡಿಮೆ. ಧರ್ಮ, ಅರ್ಥ...ಗಳ ಬಗ್ಗೆಯೂ ಅಷ್ಟೊಂದು ತಿಳುವಳಿಕೆ ಇಲ್ಲ. ಮೇಷ್ಟ್ರು ಪಾಠ ಹೇಳಿಕೊಟ್ಟುದರಲ್ಲಿ ನನಗೆಷ್ಟು ತಿಳಿಯಿತೋ ಅಷ್ಟೆ. ಅನುಮಾನ, ನನ್ನೊಳಗೆ ಜಿಜ್ಷಾಸೆ ಯಾವುದೂ ಇಲ್ಲ.
ಒಂದು ದಿನ ನಮ್ಮ ಶಾಲೆಗೆ ಕ್ರೈಸ್ತ ಸಂಸ್ಥೆಯವರು ಅವರ ಧರ್ಮ ಪ್ರಚಾರದ "ಹಳೆಯ ಒಡಂಬಡಿಕೆ" ಎಂಬ ನೀಲಿ ಬೈಂಡಿನ ಪುಸ್ತಕವನ್ನು ತಂದು ಮಕ್ಕಳಿಗೆಲ್ಲ ದರ್ಮಕ್ಕೆ ಹಂಚಿದರು. ಅಲ್ಲದೆ ಅದರ ಕುರಿತು ಏನೇನೇ ಹೇಳಿದ್ದರು(ಈಗ ನೆನೆಪಿಲ್ಲ). ಆ ಪುಸ್ತಕ ಇವತ್ತಿಗೂ ಮನೆಯ ಕಾಪಾಟಿನಲ್ಲಿ ಭದ್ರವಾಗಿದೆ. ಪುಸ್ತಕಕದ ಪುಟ ಮಾತ್ರ ತೆರೆದಿಲ್ಲ!"
ಪುಕ್ಕಟೆ ಸಿಗುವುದಾದರೆ ನನಗೊಂದು ನನ್ನಪ್ಪಂಗೊಂದು ಇರಲಿ" ಎಂದು ಕೈ ಮುಂದು ಮಾಡುವಂತ ಜನ ನಾವು.
ನಾವೆಲ್ಲ ಮಕ್ಕಳು ಸಾಲಾಗಿ ಹೋಗಿ ಕೊಟ್ಟ ಪುಸ್ತಕವನ್ನು ತಂದು ನಮ್ಮ ಜಾಗದಲ್ಲಿ ಕುಳಿತೆವು. ಆದರೆ ಒಬ್ಬ ಮುಸ್ಲಿಂ ಹುಡುಗಿಯನ್ನು ಹೊರತಾಗಿ.
ನನಗೆ ಕುಳಿತಲ್ಲೇ ಆಶ್ಚರ್‍ಯ! ಪುಕ್ಕಟೆ ಕೊಡೋ ಪುಸ್ತಕವನ್ನು ಆಕೆಗೆ ಸ್ವೀಕರಿಸಲೇನು? ಆಕೆಯಲ್ಲಿ ಹೋಗಿ ಕೇಳುವಷ್ಟು ಧೈರ್ಯ ಸಾಲಲಿಲ್ಲ. ಮೊದಲೇ ಆಕೆ ತರಗತಿಯಲ್ಲಿ ಸ್ವಲ್ಪ ಧಿಮಾಕಿನ ಹುಡುಗಿ. ಆಗಲೇ ಹುಡಗರಲ್ಲಿ ಮಾತಾಡುವಳು. ಆಶ್ಚರ್ಯವಾ? ಹುಡುಗರಲ್ಲಿ ಮಾತಾಡಿದರೆ ತಪ್ಪೇನು. ಈಗ ಅದು ಸಂಗತಿಯೇ ಅಲ್ಲ. ಸಾಮಾನ್ಯ. ಆದರೆ ನಾನು ಹೋಗುತ್ತಿದ್ದುದು ಬಹಳ ಹಳ್ಳಿ ಶಾಲೆ. ಹೆಸರಿಗೆ ತಕ್ಕಂತೆ ಕುರುಡಾಗಿತ್ತು ಆ ಹಳ್ಳಿ, ಶಾಲೆ, ಅಲ್ಲಿನ ಮೇಷ್ಟ್ರು... ಕರೆಂಟ್ ಇನ್ನೂ ಬಂದಿರಲಿಲ್ಲ, ಶಾಲೆಯಲ್ಲಿ ಶೌಚಾಲಯದ ವ್ಯವಸ್ಥೆ ಸರಿ ಇಲ್ಲ, ನೀರಿಲ್ಲ. ಕುಡಿಯಲು ದೂರದಿಂದ ಪಾಳಿಯ ಪ್ರಕಾರ ನೀರು ತಂದು ಶಾಲೆಯ ಪ್ರಾಂಗಣದಲ್ಲಿಡಬೇಕಾಗಿತ್ತು.ಸಾಲದ್ದಕ್ಕೆ ನಮ್ಮ ಮೇಷ್ಟ್ರುಗಳೂ ಭಯಂಕರ ಸ್ಟ್ರಿಕ್ಟು. ಅದರಲ್ಲೂ ಇವತ್ತಿಗೂ ನನ್ನ ಕನಸಲ್ಲಿ ಬಂದು ಹೆದರಿಸುವವರು ಲೆಕ್ಕದ ಮೇಷ್ಟ್ರು. ಅದ್ಯಕೋ ಗೊತ್ತಿಲ್ಲ ಹೆಚ್ಚಾಗಿ ಗಣಿತದ ಮೇಷ್ಟ್ರುಗಳೇ ಜೋರಿರುತ್ತಾರೆ. ಆದರೂ ನನ್ನ ಶಾಲೆ. ಮೇಷ್ಟ್ರುಗಳ ಬಗ್ಗೆ ಅಭಿಮಾನ ಖಂಡಿತಾ ಇದೆ. ವಿಶಯ ಎಲ್ಲಿಂದ ಎಲ್ಲಗೋ ಹೋಯಿತು. ಆ ಮೇಷ್ಟ್ರ ಬಗೆಗೆ ಹೇಳುವಂಥದ್ದು ಬಹಳ ಇದೆ. ಇನ್ನೊಮ್ಮೆ ಬರೆಯುತ್ತೇನೆ.
ಅಂಥ ಲೆಕ್ಕದ ಮೇಷ್ಟ್ರಗೇ ಎದುರುತ್ತರ ಕೊಟ್ಟ ಹುಡುಗಿ ಆಕೆ. ಇನ್ನು ನಾನು ಹೇಗೆ ಹೋಗಿ ಕೇಳುವುದು? ಪುಸ್ತಕ ಯಾಕೆ ಸ್ವೀಕರಿಲಿಲ್ಲ? ಎಂದು.
ಇವತ್ತು ನಾನೇ ಕೂತು ಯೋಚಿಸಿದಾಗ ಸಿಕ್ಕ ಉತ್ತರ ಇದಾಗಿರಬಹುದೇ?
ಆವರಣ ಕಾದಂಬರಿ ಓದಿ, ಇವತ್ತಿನ ಉಗ್ರಗಾಮಿ ಸಂಘಟನೆಗಳ ಉದ್ದೇಶ ನೋಡಿದರೆ....
ಆಕೆಗೆ ಆಗಲೇ ತನ್ನ ಮುಸ್ಲಿಂ ಧರ್ಮದ ಬಗೆಗೆ ಅಚಲವಾದ ಪ್ರೀತಿ ವಿಶ್ವಾಸ ಇದ್ದಿರಬಹುದೇ?
ತನ್ನ ಧರ್ಮ ಬಿಟ್ಟು ಬೇರೆ ಯಾವ ಧರ್ಮದ ಬಗೆಗಿನ ಅರಿವು ತನಗೆ ಬೇಡ ಎಂದು ಆಗಲೇ ನಿರ್ಧರಿಸಿರಬಹುದೇ?
ಪುಕ್ಕಟೆ ಕೊಟ್ಟರೂ ಅನ್ಯ ಧರ್ಮದ ಬಗೆಗಿನ ಪುಸ್ತಕ, ತನಗೆ ಅಗತ್ಯವಿಲ್ಲ ಎಂಬ ಧೋರಣೆಯೇ?
ತಾನು ಓದದ ಪುಸ್ತಕ ಮನೆಯಲ್ಲಿಟ್ಟು ಪ್ರಯೋಜನವೇನು?ಎಂಬ ನಿಲುವೇ?
ಅರ್ಥವಾಗುತ್ತಿಲ್ಲ...

27 January, 2009

ಮಾತು ಆಡಿದರೆ ಮುಗಿಯಿತು...

ಕೆಲವು ದಿನಗಳ ಹಿಂದೆ ದಿಲ್ಲಿಯಲ್ಲಿರೋ ಬಹಳ ದೊಡ್ಡ ಮೈದಾನ(ಪ್ರಗತಿ ಮೈದಾನ)ದಲ್ಲಿ ಇಂಟರ್‌ನ್ಯಾಷನಲ್ ಟ್ರೇಡ್ ಫೇರ್ ಅನ್ನೋ ಪ್ರದರ್ಶನ ನಡೆದಿತ್ತು. "ಹೋಗೋಣ 355 ನಂಬರ್ ಬಸ್ ಹತ್ಕೊಂಡು ನನ್ನ ಕಛೇರಿಗೆ ಬಾ" ಅಂತ ಗಂಡ ಕರೆದದ್ದಕ್ಕೆ ಬ್ಯಾಗ್ ಏರಿಸಿ ಹೊರಟೆ.
ನಮ್ಮ ಜೊತೆಗೆ ಅವರ ಗೆಳೆಯ ಆತನ ಹೆಂಡತಿ ಬರುತ್ತೇವೆಂದು ಹೇಳಿದ್ದಕ್ಕೆ ನಾವು ಕಛೇರಿಯಲ್ಲಿ ಕಾದೆವು ಕಾದೆವು. ಅವರುಗಳ ಪತ್ತೆ ಇಲ್ಲ! ಅದು ಬೇರೆ ಆ ದಿವಸ ಪ್ರದರ್ಶನದ ಕೊನೆಯ ದಿನವಾಗಿತ್ತು. ಬರುತ್ತೇವೆಂದು ಹೇಳಿದವರನ್ನು ಬಿಟ್ಟು ಹೋಗುವಂತಿಲ್ಲ, ಹೋದರೆ ಇಡಿಯಾಗಿ ಪ್ರದರ್ಶನವನ್ನು ನೋಡುವಷ್ಟು ಸಮಯವಿರಲಿಲ್ಲ. ಇನ್ನೇನು ಮಾಡುವುದು? ಎಂದು ಮಂಡೆ ಬಿಸಿ ಮಾಡುತ್ತಾ ಕೂತೆವು. ಕೊನೆಗೆ "ಈ ಸಲ ಬೇಡ ಮುಂದಿನ ವರ್ಷ ಯಾರಿಗೂ ಕಾಯುವುದು ಬೇಡ ನಾವೇ ಹೋಗೋಣ ಈಗ ನನ್ನನ್ನು ಬಸ್ ಸ್ಟ್ಯಾಂಡ್ ತನಕ ಬಿಡು ಮನೆಗೆ ಹೋಗುತ್ತೇನೆ" ಎಂದು ಹೇಳಿ ಹೊರಟೆ.

ಘಟನೆ_೧

"ಬಂದ ದಾರಿಗೆ ಸುಂಕವಿಲ್ಲ" ಅಲ್ಲ. ಬಸ್‌ಗೆ ಕಂಡಕ್ಟರ್‌ಗೆ ಹತ್ತು ರೂಪಾಯಿ ಕೊಟ್ಟು ಕುಳಿತೆ.
ನನ್ನ ಪಕ್ಕದಲ್ಲೇ ಬಂದು ನಿಂತ ವ್ಯಕ್ತಿ ಆತನ ಕೆಲವು ದೊಡ್ಡ ದೊಡ್ಡ ಪುಸ್ತಕಗಳನ್ನು ನನ್ನ ಕೈಗಿತ್ತ. ಅರೆ! ನಂ ಮಂಗ್ಳೂರ್ ಬುದ್ದಿ ಜನ ಇಲ್ಲೂ ಇದಾರಾ? ಅಂತ ಮನ್ಸಲ್ಲೇ ಯೋಚಿಸ್ತಾ ಇದ್ದಾಗ "ಲೋ ಮಚಾ ಈ ಬಸ್ ಹಾಸ್ಟೇಲ್ ತನಕ ಹೋಗುತ್ತಲ್ಲ?"
ದಿಲ್ಲಿಯಲ್ಲಿ ಕನ್ನಡ ಮಾತಾಡೋರು? ನನ್ ಕಿವಿ ನೆಟ್ಟಗಾಯಿತು.
"ಏನೋ ಮಾರಾಯಾ ಥೂ ನಂ ಹಾಸ್ಟೇಲ್ ಅಂತೂ...ಈ ಸಲ ಬಿಟ್ ಬಿಡ್ತೀನಿ. ಕಣೋ. ಮೂರು ಸಾವಿರ ವಾಪಾಸ್ ಕೊಡ್ತಾರಲ್ಲ?ಕೊಡ್ದೆ ಏನು ನಂದು ಗವರ್‍ನಮೆಂಟ್ ಸೀಟ್ . ಏನು ನೀರಿಲ್ಲ ಏನಿಲ್ಲ.ಬೆಳಗ್ಗೆ ಬೇಗ ಹೋದ್ರೂ ಬಿಸಿ ನೀರಿಲ್ಲ ಕಣೋ. ನೆನ್ನೆ ಪಲ್ಯ ಚೆನಾಗ್ ಮಾಡಿದ್ರಲ್ಲ, ಅದೇನೋ ಸೊಪ್ಪಿಂದು..." ಹೀಗೆ ಸಂಭಾಷಣೆ ನಡೆಯುತ್ತಿತ್ತು.
ಅಪರೂಪಕ್ಕೆ ಪರವೂರಲ್ಲಿ ಕನ್ನಡದವರು ಸಿಕ್ಕಾಗ ಕರ್ನಾಟಕದಲ್ಲಿ ನವೆಂಬರ್ ೧ರ ಕರ್ನಾಟಕ ರಾಜ್ಯೋತ್ಸವದಂತೆ ಕನ್ನಡ, ಕನ್ನಡಿಗರ ಬಗ್ಗೆ ಪ್ರೀತಿ ಉಕ್ಕಿ ಹರಿಯುತ್ತದೆ. ಆದರೂ ನಾನು ಸುಮ್ಮನೆ ಕುಳಿತು ಅವರುಗಳ ಸಂಭಾಷಣೆ ಕೇಳುತ್ತಿದ್ದೆ.
ಆತ ಕೊಟ್ಟ ಪುಸ್ತಕದಲ್ಲಿ ಯಾವ್ದೋ ಮೇಲ್ ಐಡಿ ಇತ್ತು. ನನ್ನ ಕಾಲ ಮೇಲಿದ್ದ ಆ ಪುಸ್ತಕವನ್ನ ಇನ್ನೊಬ್ಬ ಇಣುಕಿ ನೋಡಿದ. (ಫಿಮೇಲ್ ಐಡಿ ಇರಬಹುದೇನೋ ಅಂತ)
"ಲೋ ಅದು ಅವ್ರ ಬುಕ್ ಅಲ್ಲ ಕಣೋ...ಅವ್ರ ಮೇಲ್ ಐಡಿ ಅಂತ ನೋಡ್ತಾ ಇದ್ಯಾ? ಅದು ನಂ ಸರ್‌ದು...ಈ ಬಸ್ ಚೆನ್ನಾಗಿದ್ಯಯಲ್ಲ. ಕೆಲವು ಬಸ್ ಏನು ಗಲೀಜಿರುತ್ತೆ ಮಾರಾಯ, ಯಾಕೆ ಬಸ್ ನಿಂತು ಬಿಡ್ತು?"
"ಅದೇ ಮೇಲಿಂದ ಟ್ರೇನ್ ಹೋಗ್ತಾ ಇದ್ಯಲ್ಲ!",
"ತಲೆ ನಿಂದು".
ಹೀಗೆ ಅವ್ರ ಡೈಲಾಗ್‌ಗಳು ಮುಂದುವರಿಯುತ್ತಿತ್ತು. ಕುಳಿತಲ್ಲೇ ನಂಗೆ ನಗು. ಈ ಹುಡುಗರು ನನ್ ಬಗ್ಗೆ ಇನ್ನು ಏನೆಲ್ಲಾ ಹೇಳ್ತಾರೆ ಅನ್ನೋ ಕುತೂಹಲ. ಅಷ್ಟೊತ್ತಿಗೆ ಅವರಿಗೆ ಹಿಂದೆ ಸೀಟ್ ಸಿಕ್ತು. ಆ ಹುಡುಗ ನನ್ನತ್ರ ಪುಸ್ತಕ ಕೇಳಿ "ಥ್ಯಾಂಕ್ಯೂ" ಅಂದಾಗ "ಪರವಾಗಿಲ್ಲ , ಥ್ಯಾಂಕ್ಯೂ ಎಲ್ಲ ಬೇಡ ಬಿಡಿ" ಅಂದೆ.
ನಿಂತಲ್ಲೇ ಶಾಕ್ ಕೊಟ್ಟಂಗಾಯ್ತು ಅವರಿಗೆ. "ಮೇಡಮ್ಮು ಕನ್ನಡದವ್ರಾ? ಮೊದಲೇ ಹೇಳೋದಲ್ವಾ?" ಅಂತ ಜೋರಾಗಿ ಹೇಳಿದಾಗ ಬಸ್ಸಲ್ಲಿದ್ದವರೆಲ್ಲ ನಮ್ಮತ್ತ ತಿರುಗಿ ನೋಡಿದರು.
"ಏನೇನು ಡಯಲಾಗ್ ಹೇಳ್ತೀರಾ ಅಂತ ಕೇಳ್ಕಂಡು ಮತ್ತೆ ನಿಮ್ಮತ್ರ ಮಾತಾಡುವ ಅಂತಿದ್ದೆ" ಅಂದೆ.
ಪಾಪ ಹುಡುಗರು ಐಎಸ್ ಕೋಚಿಂಗಿಗೆ ಮೈಸೂರು, ಕಾರವಾರದಿಂದ ಬಂದವರಂತೆ.

ಘಟನೆ_

ಹೀಗೇ ಇನ್ನೊಂದು ಘಟನೆ ನನಗಾಗಿತ್ತು. ಕಾಲೇಜಿಗೆ ಹೋಗುತ್ತಿದ್ದ ಸಮಯ. ನನ್ನ ಸೌಂಡ್ ಬಾಕ್ಸ್ ಒಳಗೆ ವಾಲ್ಯೂಮ್ ಸ್ವಲ್ಪ ದೊಡ್ಡದಾಗಿ ಫಿಕ್ಸ್ ಮಾಡಿದಾನೆ ಆ ಭಗವಂತ!
ಆಗ ಮಂಗಳೂರಿನಲ್ಲಿ ಮರಕಡ ಸ್ವಾಮಿಗಳ ಬಗ್ಗೆ ಏನೋ ಗುಸು ಗುಸು, ಬಿಸಿ ಬಿಸಿ ಚರ್ಚೆ ಜೋರಾಗೇ ನಡೆಯುತ್ತಿತ್ತು. ಅದನ್ನ ನನ್ನ ಮುಸ್ಲಿಂ ಗೆಳತಿಯೊಬ್ಬಳ ಹತ್ತಿರ ಹೇಳುತ್ತಿದ್ದೆ. ಆಕೆಗೆ ಮಾತ್ರವಲ್ಲ ಬಸ್ಸಲ್ಲಿದ್ದವರಿಗೆಲ್ಲ ಕೇಳುವಷ್ಟು ಜೋರಾಗಿ ಸ್ಪಿರಿಟ್ಟಲ್ಲಿ ಹೇಳುತ್ತಿದ್ದೆ. ಅದರ ಜೊತೆ ಒಡಿಯೂರು ಸ್ವಾಮಿಗಳು ಮರದ ಗೆಲ್ಲಿನಲ್ಲಿ ಮಂಗನಂತೆ ಹಾರಾಡುವುದನ್ನು (ಸ್ವತಃ ನಾನು ನೋಡಿಲ್ಲ. ನೋಡಿದವರು ಹೇಳಿದ್ದನ್ನು ಕೇಳಿದ್ದೇನೆ.) ಅವರ ಬಗೆಗಿನ ಊಹಾಪೋಹವನ್ನೆಲ್ಲ ನನಗೆ ಗೊತ್ತಿದ್ದ ಪಾಂಡಿತ್ಯವನ್ನು ಆಕೆಯ ಎದುರು ಪ್ರದರ್ಶಿಸುತ್ತಿದ್ದೆ. ಪ್ರಪಂಚದ ಗೊಡವೆಯೂ ಇಲ್ಲದೆ!
ಇದ್ದಕ್ಕಿದ್ದಂತೆ ನನ್ನ ಪಕ್ಕದ ಸೀಟಿನಲ್ಲಿ ಕುಳಿತ ಸುಮಾರು ೫೦ ವರ್ಷದ ಹೆಂಗಸೊಬ್ಬಳು "ಸ್ವಾಮಿಗಳ ಬಗ್ಗೆ ನಿಮಗೇನು ಗೊತ್ತು? ಅವ್ರ ಬಗ್ಗೆ ಹಾಗೆಲ್ಲ ಮಾತನಾಡಬೇಡಿ, ನಾವು ಅವರ ಭಕ್ತರು" ಅನ್ನಬೇಕೆ?
ನನ್ನ ಎದೆ ದಸಕ್ ಎಂದಿತು. ಕುಳಿತಲ್ಲೆ ಮೈ ಬಿಸಿಯಾಯಿತು. ಆಕೆ ಬಸ್ಸಲ್ಲಿದ್ದವರೆಲ್ಲರೆದುರು ನನ್ನ ಮೇಲೆ ಎಗರಾಡಿದರೆ? ನನ್ನತ್ರ ಎದುರುತ್ತರ ಕೊಡುವಷ್ಟು ಪಾಂಡಿತ್ಯವೂ ಇಲ್ಲ, ಧೈರ್ಯವೂ ಇಲ್ಲ. ನನ್ನ ಪುಣ್ಯಕ್ಕೆ ಹಾಗೇನೂ ಆಗಿಲ್ಲ.

ಘಟನೆ_೩

ನನ್ನ ಅತ್ತೆಗೂ ಹೀಗೇ ಆಗಿತ್ತಂತೆ. ಅಜ್ಜಿ ಮನೆಗೆ ಹೋದಾಗ ನಾವೆಲ್ಲ ನೆಂಟರು ಸೇರಿರುವಾಗ ಹಳೆಯ ಘಟನೆಗಳ ಕುರಿತು ಮೆಲುಕು ಹಾಕುವ ಪದ್ದತಿ.
ನನ್ನ ಸೋದರಮಾವನಿಗೆ ಪುತ್ತೂರಿನಲ್ಲಿ "ಕಲ್ಪವೃಕ್ಷ" ಅನ್ನುವ ಐಸ್ ಕ್ರೀಮ್ ಪಾರ್ಲರ್ ಇತ್ತು. ನಾನು ಸಣ್ಣದಿರುವಾಗ ಪುತ್ತೂರಿಗೆ ಹೋದರೆ ಖಾಯಂ ಮಾವನ ಅಂಗಡಿಯಲ್ಲಿ ಪುಕ್ಕಟೆ ಗಡ್‌ಬಡ್. ನನ್ನಂತವರು ಪುಕ್ಕಟೆ ತಿಂದು ತಿಂದು ಲಾಸ್ ಆಗಿ ಐಸ್ ಕ್ರೀಮ್ ಜೊತೆ ಅಂಗಡಿಯೂ ಕರಗಿ ಹೋಯಿತೋ? ಗೊತ್ತಿಲ್ಲ.
ಅತ್ತೆ ಕ್ಯಾಶಿಯರ್ ಕುರ್ಚಿಯಲ್ಲಿ ಕುಳಿತಿದ್ದ ದಿನ ನಾಲ್ಕೈದು ಹುಡುಗರು ಐಸ್ ಕ್ರೀಮ್ ತಿನ್ನುತ್ತಾ ಅತ್ತೆಯ ಜೊತೆ ಮಾತನಾಡಲು ತೊಡಗಿದರಂತೆ. ವಿಶಯ ಎಲ್ಲೆಲ್ಲೋ ಸುತ್ತಾಡಿ ಕೊನೆಗೆ ಧರ್ಮದ ಬಗ್ಗೆ ತಿರುಗಿತಂತೆ.
"ಮುಸ್ಲಿಂ ಜನರೇ ಮೋಸ, ಅವರ ವರ್ತನೆಯೇ ವಿಚಿತ್ರ, ಯಾರನ್ನು ನಂಬಿದರೂ ಅವರನ್ನು ನಂಬಬಾರದು" ಅಂತೆಲ್ಲಾ ಅತ್ತೆಯ ಭಾಷಣ.
ಅವರೆಲ್ಲಾ ಇಸ್ ಕ್ರೀಮ್ ತಿಂದು ದುಡ್ಡು ಕೊಡುವಾಗ "ಅಕ್ಕ ನಾವೂ ನೀವು ಬೈದ ಜಾತಿಗೇ ಸೇರಿದವರು." ಅಂದಾಗ ಅತ್ತೆ ಸುಸ್ತಂತೆ!
ಅದಕ್ಕೇ ಸಾರ್ವಜನಿಕ ಸ್ಥಳಗಳಲ್ಲಿ ಯಾರನ್ನೂ ದೂರುವ ವಿಶಯ ಮಾತಾಡಬೇಡಿ. ಮಾತನಾಡಿದರೂ ಹೊಗಳುವ ವಿಶಯ ಮಾತಾಡಿ.

12 January, 2009

ಚಳಿ ಚಳಿ ತಾಳೆನು ದಿಲ್ಲಿ ಚಳಿಯಾ...


ಮಂಕಿ ಕ್ಯಾಪ್, ಕೈಗೆ ಗ್ಲೌಸ್, ಮೈಗೆ ಥರ್ಮಲ್ ವೇರ್, ಮೇಲಿಂದ ಅಂಗಿ, ಅದರ ಮೇಲಿಂದ ಸ್ವೆಟರ್, ಶಾಲು. ಇದಿಷ್ಟು ಸಾಕಾಗಿಲ್ಲವೆಂದರೆ ಜಾಕೆಟ್ಟು, ಕಾಲಿಗೆ ಸಾಕ್ಸು. ಮಣದ ಭಾರದ ಬಟ್ಟೆ ಹೇರಿಕೊಂಡರೂ ಮೈ ನಡುಗಿಸುತ್ತದೆ ದಿಲ್ಲಿ ಚಳಿ.
ಜೀವನದಲ್ಲಿ ಈತನಕ ಇಷ್ಟು ಅಂಗಿ ಹಾಕಿಯೇ ಇಲ್ಲ. ಅದು ಬಿಡಿ ಸ್ವೆಟರ್ ಹಾಕಿದ ನೆನಪೂ ಇಲ್ಲ. ಕಳೆದ ವರ್ಷ ಅಮ್ಮಮ್ಮ (ಅಜ್ಜಿ) ಕಾಶಿಗೆ ಹೋಗಿದ್ದಾಗ ನನಗಾಗಿ ಒಂದು ಸ್ವೆಟರ್ ತಂದಿದ್ದರು. ಅಮ್ಮಮ್ಮ ಹೇಗೂ ಗಿಫ್ಟ್ ಕೊಡುವಾಗ ಉಪಯೋಗಕ್ಕೆ ಬಾರದ ಸ್ವೆಟರ್ ಕೊಡುವ ಬದಲು ಡ್ರೆಸ್ಸಾದರೂ ತಂದಿದ್ದರೆ ಚೆನ್ನಾಗಿತ್ತು ಅಂತ ಮನಸೊಳಗೇ ಅಂದುಕೊಂಡು, ಒಮ್ಮೆ ಹಾಕಿ ಕಪಾಟೊಳಗಿಟ್ಟಿದ್ದೆ.ಈಗ ಗೊತ್ತಾಯಯ್ತು. ಅಮ್ಮಮ್ಮನ ಸಿಕ್ಸ್ ಸೆನ್ಸಿಗೆ ಆಗಲೇ ಗೊತ್ತಿತ್ತೇನೊ ನಾನು ಮುಂದೆ ದಿಲ್ಲಿಯ ಚಳಿ ಅನುಭವಿಸಲಿರುವೆನೆಂದು. ಈಗ ಮನೆಯಲ್ಲಿ ದಿನಾ ನನ್ನನ್ನು ಚಳಿಯಿಂದ ಕಾಪಾಡ್ತಿರೋದು ಅದೇ ಸ್ವೆಟರ್. ಅಮ್ಮಮ್ಮನಿಗೆ ೪ ಡಿಗ್ರಿ ಸೆಲ್ಶಿಯಸ್ ಚಳಿಯಷ್ಟು ಆಳವಾದ ಥ್ಯಾಂಕ್ಸ್ ಹೇಳಲೇ ಬೇಕು.
ಇಲ್ಲಿ ತನಕ ಕಾಸರಗೋಡು, ಮಂಗಳೂರಲ್ಲಿದ್ದ ನಂಗೆ ಚಳಿ ಎಂದರೇನೆಂದು ಅನುಭವಿಸಿ ಖಂಡಿತಾ ಗೊತ್ತಿರಲಿಲ್ಲ. ಅಲ್ಲಿಂದ ನೇರ ಇಂಥ ಘನಘೋರ ಚಳಿ ಪ್ರದೇಶಕ್ಕೆ ಬಂದರೆ? ಬಾಣಲಿಯಿಂದ ಪ್ರಿಡ್ಜಿಗೆ ಬಿದ್ದಂತಾಗುತ್ತದೆ. ಅಬ್ಬಬ್ಬಾ! ಒಮ್ಮೆಯಂತೂ ಶರೀರದ ಕಂಡೆನ್ಸರ್ ವೀಕ್ ಆಗೋದು ಗ್ಯಾರೆಂಟಿ.
ಮೈಯಲ್ಲಿ ಜ್ವರ! ಮೂಗಲ್ಲಿ ಸೊರ ಸೊರ!
ಆದರೂ ಈ ವಾತಾವರಣವೂ ಒಂಥರಾ ಮಜಾ. ಇಷ್ಟಲ್ಲಾ ಅಂಗಿ ಹಾಕ್ಬೇಕಲ್ಲಾ ಅನ್ನೋ ಬೇಜಾರಿನ ಹೊರತಾಗಿ ದಿನಾ ಬಟ್ಟೆ ತೊಳೆಯೋ ಕೆಲಸ ಇಲ್ಲ. ಮನೆ ಎಸಿಗಿಂತ ಕೂಲ್. ಬೆಚ್ಚಗೆ ರಜಾಯಿ ಹೊದ್ದು ಮಲಗೋ ಸುಖ ಈಗಲೇ ಅನುಭವಿಸಬೇಕು. ಬೆಳಗ್ಗೆ ಗಂಟೆ ಎಂಟಾದರೂ ಬೆಳಕಿಲ್ಲ. ಬಿಸಿ ಬಿಸಿ ಹಬೆಯಾಡೋ ಚಾಹ ಕುಡಿಯಲು ಮಜಾ ಬರುವುದೇ ಈಗ.
ಬೆಳಗ್ಗೆ ಮನೆಯಿಂದ ಹೊರಗೆ ಕಾಲಿಟ್ಟೆಯೋ ನೂರು ಇನ್ನೂರು ಮೀಟರ್ ದೂರಕ್ಕಿಂತ ಆಚೆ ಏನು ಕಾಣಿಸೋದಿಲ್ಲ. ೨೦೦೭ರ ಗಿನ್ನಿಸ್ ವರ್ಲ್ಡ ರೆಕಾರ್ಡಿನ ಪ್ರಕಾರ ವಿಶ್ವದ ಅತಿ ದೊಡ್ಡ ಮತ್ತು ಅಗಲವಾಗ ಹಿಂದೂ ದೇವಾಲಯ ಎಂದು ಪ್ರಸಿದ್ದಿಪಡೆದ ಅಕ್ಷರಧಾಮ ದೇವಸ್ಥಾನವಿರುವುದು ನಮ್ಮ ಮನೆಯಿಂದ ೨ಕಿಮೀ. ದೂರದಲ್ಲಿ. ಸದ್ಯ ಒಂದು ಮಧ್ಯಾಹ್ನ ಆ ದಾರಿಯಾಲ್ಲಾಗಿ ಹೋದರೆ ಅಕ್ಷರಧಾಮ ನಾಪತ್ತೆ. ಪೂರ್ತಿಯಾಗಿ ಮಂಜು ಮುಸುಕು!
ಮಧ್ಯಾಹ್ನ ಹೋದರೆ ಇಂಡಿಯಾ ಗೇಟೂ ಇಲ್ಲ, ರಾಷ್ಟ್ರಪತಿ ಭವನವೂ ಇಲ್ಲ!
ದೇಶದ್ದಲ್ಲೆಲ್ಲ ಉಗ್ರಗಾಮಿಗಳ ಹಾವಳಿ. ಇಲ್ಲಿ ಜನರೆಲ್ಲ ಉಗ್ರಗಾಮಿಗಳಂತೆ, ಕಣ್ಣು ಮೂಗಿನ ಹೊರತಾಗಿ ಬೇರೆಲ್ಲ ಭಾಗ ಫುಲ್ ಪ್ಯಾಕ್.
ಡೆಲ್ಲಿಯ ಅಂದವಿರುವುದು ಇಲ್ಲಿನ ದೊಡ್ಡ ದೊಡ್ಡ ಪಾರ್ಕ್ ಮತ್ತು ವೃತ್ತ(ಸರ್ಕಲ್, ಗೋಲ್ ಚಕ್ಕರ್)ದಿಂದ. ಖಂಡಿತವಾಗಿಯೂ ನಮ್ಮ ಮಂಗಳೂರಿನ ಕದ್ರಿ ಪಾರ್ಕ್, ಪಂಪ್‌ವೆಲ್ ವೃತ್ತದಂತಿಲ್ಲ. ಚಂದವಾಗಿ ಇಟ್ಟಿದ್ದಾರೆ. ಚಳಿಗಾಲದಲ್ಲಿ ಇಂತಹ ಪಾರ್ಕು, ವೃತ್ತ, ಹೂದೋಟಗಳಿಗೆ ಹೋದರೆ ಅಂದದ ಹೂವುಗಳ ಚೆಂದದ ನೋಟ ಬೋನಸ್. ನಮುನಮೂನೆ ಕಣ್ಸೆಳೆವ ಬಣ್ಣಗಳ ಡೇಲಿಯಾ, ಸೇವಂತಿಗೆ ಹೂವು ಹಾಕಲು ಬೇಕಾದಷ್ಟು ಬಟ್ಟೆ, ಇರಲು ಸರಿಯಾದ ಮನೆ ಉಳಿದ ಎಲ್ಲ ಸೌಕರ್ಯ ಇದ್ದವರಿಗೆ ಮಾತ್ರ ಚಳಿಗಾಲದ ಈ ಮಜ. ಹೇಳಿಕೇಳಿ ನಮ್ಮದು ಬಡ ರಾಷ್ಟ್ರ! ಬಡತನ ನಮ್ಮ ದೇಶದ ರಾಜಧಾನಿಯನ್ನು ಬಿಡಲು ಸಾದ್ಯವೇ? ಚಂದದ ರಸ್ತೆಗಳ ನಡುವೆ ಅಷ್ಟೇ ಚಂದದ ವೃತ್ತ, ಪಕ್ಕದಲ್ಲಿ ಹರುಕಲು ಬಟ್ಟೆ ಹಾಕಿ ನಡುಗುವ ದೇಹ. ಒಂದು ಹೊತ್ತು ಊಟಕ್ಕೂ ಗತಿ ಇಲ್ಲದ ಇಂತಹವರು ತಮ್ಮ ದೇಹವನ್ನು ಅದೆಷ್ಟು ಬಟ್ಟೆಗಳಿಂದ ರಕ್ಷಿಸಬಹುದು? ಊಟ, ಬಟ್ಟೆ, ಮನೆ ಸರಿಯಾಗಿಲ್ಲದ ಅದೆಷ್ಟೋ ಜನರು ಇಂತಹ ಘನಘೋರ ಚಳಿಯಲ್ಲಿ ಇನ್ನೇನಾಗಲು ಸಾದ್ಯ? "ಚಳಿಯಿಂದ ಉತ್ತರಭಾರತದಲ್ಲಿ ಇಷ್ಟು ಜನರ ಸಾವು" ಅಂತ ಪೇಪರಿನಲ್ಲಿ ಓದುವಾಗ ಮೊದಲು ಆಶ್ಚರ್ಯ ಆಗುತ್ತಿತ್ತು. ಈಗ ಅದರ ಅರ್ಥವೇನೆಂದು ತಿಳಿಯಿತು.
ಅದೇನಾದರೂ ಇರಲಿ, ಒಮ್ಮೆ ಡೆಲ್ಲಿಗೆ ಬಂದು ಚಳಿಯ ಅನುಭವ ಪಡೆಯಿರಿ.