17 March, 2009

ವಿಚಾರ ಸಂಕಿರಣ ಎಂಬ ಹರಕೆ.....

ಕಾಲೇಜು ದಿನಗಳ ನಂತರ ಅಪ್ಪಟ ಸಾಹಿತ್ಯಿಕವಾದ, ಥಿಯರಿಟಿಕಲ್ ಆದ ಭಾಷಣ ಕೇಳಿರಲಿಲ್ಲ. ಆದರೆ ಇತ್ತೀಚೆಗೆ ಮಂಗಳೂರಿನಲ್ಲಿ ಕಿಟೆಲರ ಬಗ್ಗೆ ನಡೆದ ಅಂತಾರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಅನಿವಾರ್ಯ ಕಾರಣದಿಂದ ಹೊಗಲೇ ಬೇಕಾಯಿತು. ಶೈಕ್ಷಣಿಕ ಶಿಸ್ತಿನಿಂದ ದೂರವಾಗಿ ಅದಾಗಲೇ ೩ ವರ್ಷವಾಗುತ್ತಾ ಬಂತು. ಆದ್ದರಿಂದ ಇಂದು ಅಂಥ (ಬೋರಿಂಗ್)ಭಾಷಣ ಕೇಳುವಂಥ ತಾಳ್ಮೆಯಾಗಲೀ ಆಸಕ್ತಿಯಾಗಲೀ ಕಡಿಮೆಯಾಗುತ್ತಿದೆ.
ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಎಂದು ಹೆಸರಿದ್ದರೂ ಅಲ್ಲಿ ಯಾವ ಬಿಳಿ ಅಥವಾ ಕರಿ ತಲೆಗಳು ಕಾಣಿಸಲಿಲ್ಲ. (ವಿದೇಶಗಳಿಗೆ ಆಗಾಗ ಸರಕಾರಿ ಯಾ ಸಂಸ್ಥೆಗಳ ಖರ್ಚಿನಲ್ಲಿ ಭೇಟಿ ನೀಡುವ ನಮ್ಮ ವಿಧ್ವಾಂಸರಿಗೇ ಹಾಗೆ ಸಂಭೋಧಿಸಿರಬಹುದೇ?) ಸಂಯೋಜಕರು ಮತ್ತು ಭಾಷಣ ಕೊರೆಯುವವರ ಹೊರತಾಗಿ ನನ್ನಂತೆ ಅನಿವಾರ್ಯಕ್ಕೆ ಹೋದವರನ್ನು ಬಿಟ್ಟು ಆಸಕ್ತಿ ಇರುವ ಯಾವ ತಲೆಗಳೂ ಅಲ್ಲಿರಲಿಲ್ಲ.
ಕನ್ನಡದಲ್ಲಿ ಮೊದಲಿಗೆ ನಿಘಂಟು ರಚಿಸಿದವರು ಕಿಟೆಲ್ ಎಂದು ಸಣ್ಣ ತರಗತಿಯಿಂದಲೂ ಕಲಿತ, ಕೇಳಿದ ವಾಕ್ಯದ ಹೊರತಾಗಿ ಅಲ್ಲಿ ಮಂಡಿತವಾದ ಭಾಷಣದಿಂದೇನೂ ಎಫ್ಫೆಕ್ಟ್ ಆಗಲಿಲ್ಲ. ಕಾರಣ ಇಷ್ಟೇ- ಅಲ್ಲಿ ಬಂದವರೆಲ್ಲ ಶೈಕ್ಷಣಿಕ ಸಂಸ್ಥೆಗಳಲ್ಲಿ ಕೆಲಸ ಮಾಡುವ ದೊಡ್ಡ ಮಂಡೆಯವರು! ನಾಲ್ಕು ಪುಸ್ತಕಗಳನ್ನಿಟ್ಟು ತಯಾರಿಸಿದ ಪ್ರಬಂಧಗಳು. ಒಂದಿಬ್ಬರಂತೂ ಪೇಪರ್ ಪ್ರೆಸಂಟೇಶನ್ ಅಂದರೆ ಪಕ್ಕಾ ಪೇಪರ್ ಮುಂದಿಟ್ಟು ಸ್ಪೀಡಾಗಿ ಓದುತ್ತಿದ್ದರು. (ಸಣ್ಣ ತರಗತಿಯಲ್ಲಿ ಮೇಷ್ಟ್ರು ಒಬ್ಬೊಬ್ಬರನ್ನೇ ನಿಲ್ಲಿಸಿ ಪಾಠ ಓದಿಸುತ್ತಿದ್ದುದು ನೆನಪಾಯಿತು.) ಅನುಸ್ವಾರ, ವಿಸರ್ಗ, ಬಿಂದು ಹೀಗೆ ಹಲವು ಶಬ್ದಗಳು ಕೂತು ತೂಕಡಿಸುತ್ತಿದ್ದ ನನ್ನ ತಲೆಗೆ ಬಡಿಯುತ್ತಲೇ ಇತ್ತು. ವರ್ಷಗಟ್ಟಲೆ ಪಾಟ ಹೇಳಿಕೊಡುತ್ತಿದ್ದ ಮೇಷ್ಟ್ರುಗಳಿಗೆ ತಾವು ಓದಿ ಅಧ್ಯಯನ ಮಾಡಿದ ವಿಷಯದಲ್ಲಿ ನಾಲ್ಕು ಪಾಯಿಂಟ್ ಇಟ್ಟು ನೆರೆದಿದ್ದ ಹತ್ತು ಜನರ ಮುಂದೆ ಹೇಳಲು ಸಾಧ್ಯವಿಲ್ಲವೆ? ಬೇಸರವಾಯಿತು.
ಯಾಕೆ ಶಿಕ್ಷಣ ಸಂಸ್ಥೆಯವರು ಅಷ್ಟೆಲ್ಲಾ ಖರ್ಚುಮಾಡಿ ಅಂತಹ ಇಂಟರ್ ನ್ಯಾಶನಲ್ ಸೆಮಿನಾರುಗಳನ್ನು ಇಡುತ್ತರೋ? ಅಷ್ಟು ಹೊತ್ತು ಕೂತು ಊಟ ಮಾಡಿ ಬಂದ ನನಗೆ ಅರ್ಥವಾಗಲಿಲ್ಲ.
ಕನ್ನಡ ಸಾಹಿತ್ಯಕ್ಕೆ ಅಪಾರವದ ಕೊಡುಗೆ ನೀಡಿದ ಕಿಟೆಲರ ಬಗ್ಗೆ ಗೌರವ ಇದೆ.(ಆತನ ಕೊಡುಗೆಯ ಹಿಂದೆ ಸಾಕಷ್ಟು ಒತ್ತಡದ, ಆದೇಶದ ಅನಿವಾರ್ಯ ಕಾರಣಗಳಿದ್ದವು,) ಆದರೆ ಇಂದು ಇಂತಹ ಸೆಮಿನಾರ್ ಗಳನ್ನು ಮಾಡುವುದು ಎಷ್ಟು ಪ್ರಸ್ತುತ? ಕಿಟೆಲರ ಸಾಧನೆಯನ್ನು ನಾಲ್ಕು ಜನರಿಗೆ ತಲಪಿಸುವ ಕೆಲಸ, ಆತನ ಹಾದಿಯಲ್ಲಿ ಸಾಗುವ ಪ್ರಯತ್ನ ಹೀಗೆ ಹಲವಾರು ಉತ್ತರಗಳು ಬರಬಹುದು. ಆದರೆ ಅಂತರ್ಜಾಲ ಇರುವ ಇಂದಿನ ಸಂದರ್ಭದಲ್ಲಿ ಆ ಕೆಲಸಗಳೆಲ್ಲ ಕಾರ್ಯರೂಪಕ್ಕೆ ಖಂಡಿತಾ ಬರುವುದಿಲ್ಲ. ಅಲ್ಲದ ಅಲ್ಲಿಗೆ ಬಂದವರೆಲ್ಲ ಕೂದಲು ಬೆಳ್ಳಗಾದವರು, ಭಾಷಣ ಮಾಡಿದವರೂ ಅವರ ಹೊತ್ತಿಗೆ ಬಂದು ತಮ್ಮ ಕೆಲಸವಾದ ನಂತರ ಕಳಚಿಕೊಂಡವರೇ.
ಇಂತಹ ಕಾರ್ಯಕ್ರಮ ಮಾಡಲು ಶೈಕ್ಷಣಿಕ ಸಂಸ್ಥೆಗಳಿಗೆ ಒಂದಷ್ಟು ದುಡ್ಡು ಬರುತ್ತದೆ. ಬ್ಯಾಂಕ್ ನವರೂ ದಾನ ಮಾಡುತ್ತಾರೆ. ಅದರಲ್ಲಿ ಸ್ವಲ್ಪ ಹಣ ಹೀಗೆ ಖರ್ಚು ಮಾಡಿದರೆ, ಸ್ವಲ್ಪ ಈಗಾಗಲೇ ತುಂಬಿದ ಕಿಸೆಗಳಿಗೆ ಸೇರುತ್ತವೆ. ಮರುದಿನ ಪೇಪರಿನಲ್ಲಿ ಭಾಷಣ ಮಾಡಿದ, ಸಭಾ ಕಾರ್ಯಕ್ರಮದ ಫೋಟೋ, ಮ್ಯಾಟರ್ ನೊಂದಿಗೆ ಮುಕ್ತಾಯವಾಗುತ್ತದೆ.
ನಮ್ಮ ಸಮಾಜದಲ್ಲಿ ಅದೆಷ್ಟೋ ವಿದ್ಯಾರ್ಥಿಗಳು ಓದಲು ದುಡ್ಡಿಗಾಗಿ ಕಷ್ಟಪಡುತ್ತರೋ, ಲೆಕ್ಕ ಸಿಕ್ಕದು. ಅಂತಹ ವಿದಾರ್ಥಿಗಳಿಗಾದರು ಈ ದುಡ್ಡನ್ನು(ಕಿಟೆಲರ ಹೆಸರಿನಲ್ಲಿ) ನೀಡಿದರೆ ಅವರು ಮನಪೂರ್ವಕವಾಗಿ ನಮಿಸಬಹುದು. ಕುತೂಹಲಕ್ಕಾದರೂ ಕಿಟೆಲರ ಸಾಧನೆಯನ್ನು ಗುರುತಿಸುತ್ತಿದ್ದರೋ... ಆದರೇನು ಮಾಡುವುದು ಇದನ್ನೆಲ್ಲ ಹೇಳುವವರಾರು? ಹೇಳಿದರೆ ಮಾಡುವವರಾರು?
ಕೊನೆಯಲ್ಲಿ ಮುಖ್ಯಾಂಶ:-ಅಷ್ಟು ವಯಸ್ಸಾದರೂ, ತನ್ನ ಸಣ್ಣ ದೇಹದ ಪುಟು ಪುಟು ಹೆಜ್ಜೆಯಿಡುತ್ತಾ ಸ್ಟೇಜಿಗೆ ಬಂದು ಮೈಕ್ ಮುಂದೆ ನಿಂತು ಭಾಷಣ ಮಾಡಿದ ಶ್ರೀನಿವಾಸ ಹಾವನೂರರ ಅಗಾಧ ಪಾಂಡಿತ್ಯಕ್ಕೂ ಚುರುಕು ನಡಿಗೆಗೂ ಬೆರಗಾದೆ!!!

1 comment:

ವಿನಾಯಕ ಭಟ್ಟ said...

ಅದಕ್ಕೇ ಅದನ್ನು ಸೆಮಿ ನಾರು ಅನ್ನುವುದು.....
ಕೂದಲು ಸುಮ್ಮನೆ ಬೆಳ್ಳಗಾಗುವುದಿಲ್ಲ. ಇಂತಹ ಸೆಮಿನಾರುಗಳು ಅದನ್ನು ಹಣ್ಣು ಮಾಡುತ್ತವೆ. ಅದರ ದ್ವೇಷ ತೀರಿಸಿಕೊಳ್ಳಲು ಕೂದಲು ಹಣ್ಣಾದವರು ಕಪ್ಪು ಕೂದಲಿನವರಿಗೆ ಭಾಷಣ ಮಾಡುತ್ತಾರೆ.