27 January, 2009

ಮಾತು ಆಡಿದರೆ ಮುಗಿಯಿತು...

ಕೆಲವು ದಿನಗಳ ಹಿಂದೆ ದಿಲ್ಲಿಯಲ್ಲಿರೋ ಬಹಳ ದೊಡ್ಡ ಮೈದಾನ(ಪ್ರಗತಿ ಮೈದಾನ)ದಲ್ಲಿ ಇಂಟರ್‌ನ್ಯಾಷನಲ್ ಟ್ರೇಡ್ ಫೇರ್ ಅನ್ನೋ ಪ್ರದರ್ಶನ ನಡೆದಿತ್ತು. "ಹೋಗೋಣ 355 ನಂಬರ್ ಬಸ್ ಹತ್ಕೊಂಡು ನನ್ನ ಕಛೇರಿಗೆ ಬಾ" ಅಂತ ಗಂಡ ಕರೆದದ್ದಕ್ಕೆ ಬ್ಯಾಗ್ ಏರಿಸಿ ಹೊರಟೆ.
ನಮ್ಮ ಜೊತೆಗೆ ಅವರ ಗೆಳೆಯ ಆತನ ಹೆಂಡತಿ ಬರುತ್ತೇವೆಂದು ಹೇಳಿದ್ದಕ್ಕೆ ನಾವು ಕಛೇರಿಯಲ್ಲಿ ಕಾದೆವು ಕಾದೆವು. ಅವರುಗಳ ಪತ್ತೆ ಇಲ್ಲ! ಅದು ಬೇರೆ ಆ ದಿವಸ ಪ್ರದರ್ಶನದ ಕೊನೆಯ ದಿನವಾಗಿತ್ತು. ಬರುತ್ತೇವೆಂದು ಹೇಳಿದವರನ್ನು ಬಿಟ್ಟು ಹೋಗುವಂತಿಲ್ಲ, ಹೋದರೆ ಇಡಿಯಾಗಿ ಪ್ರದರ್ಶನವನ್ನು ನೋಡುವಷ್ಟು ಸಮಯವಿರಲಿಲ್ಲ. ಇನ್ನೇನು ಮಾಡುವುದು? ಎಂದು ಮಂಡೆ ಬಿಸಿ ಮಾಡುತ್ತಾ ಕೂತೆವು. ಕೊನೆಗೆ "ಈ ಸಲ ಬೇಡ ಮುಂದಿನ ವರ್ಷ ಯಾರಿಗೂ ಕಾಯುವುದು ಬೇಡ ನಾವೇ ಹೋಗೋಣ ಈಗ ನನ್ನನ್ನು ಬಸ್ ಸ್ಟ್ಯಾಂಡ್ ತನಕ ಬಿಡು ಮನೆಗೆ ಹೋಗುತ್ತೇನೆ" ಎಂದು ಹೇಳಿ ಹೊರಟೆ.

ಘಟನೆ_೧

"ಬಂದ ದಾರಿಗೆ ಸುಂಕವಿಲ್ಲ" ಅಲ್ಲ. ಬಸ್‌ಗೆ ಕಂಡಕ್ಟರ್‌ಗೆ ಹತ್ತು ರೂಪಾಯಿ ಕೊಟ್ಟು ಕುಳಿತೆ.
ನನ್ನ ಪಕ್ಕದಲ್ಲೇ ಬಂದು ನಿಂತ ವ್ಯಕ್ತಿ ಆತನ ಕೆಲವು ದೊಡ್ಡ ದೊಡ್ಡ ಪುಸ್ತಕಗಳನ್ನು ನನ್ನ ಕೈಗಿತ್ತ. ಅರೆ! ನಂ ಮಂಗ್ಳೂರ್ ಬುದ್ದಿ ಜನ ಇಲ್ಲೂ ಇದಾರಾ? ಅಂತ ಮನ್ಸಲ್ಲೇ ಯೋಚಿಸ್ತಾ ಇದ್ದಾಗ "ಲೋ ಮಚಾ ಈ ಬಸ್ ಹಾಸ್ಟೇಲ್ ತನಕ ಹೋಗುತ್ತಲ್ಲ?"
ದಿಲ್ಲಿಯಲ್ಲಿ ಕನ್ನಡ ಮಾತಾಡೋರು? ನನ್ ಕಿವಿ ನೆಟ್ಟಗಾಯಿತು.
"ಏನೋ ಮಾರಾಯಾ ಥೂ ನಂ ಹಾಸ್ಟೇಲ್ ಅಂತೂ...ಈ ಸಲ ಬಿಟ್ ಬಿಡ್ತೀನಿ. ಕಣೋ. ಮೂರು ಸಾವಿರ ವಾಪಾಸ್ ಕೊಡ್ತಾರಲ್ಲ?ಕೊಡ್ದೆ ಏನು ನಂದು ಗವರ್‍ನಮೆಂಟ್ ಸೀಟ್ . ಏನು ನೀರಿಲ್ಲ ಏನಿಲ್ಲ.ಬೆಳಗ್ಗೆ ಬೇಗ ಹೋದ್ರೂ ಬಿಸಿ ನೀರಿಲ್ಲ ಕಣೋ. ನೆನ್ನೆ ಪಲ್ಯ ಚೆನಾಗ್ ಮಾಡಿದ್ರಲ್ಲ, ಅದೇನೋ ಸೊಪ್ಪಿಂದು..." ಹೀಗೆ ಸಂಭಾಷಣೆ ನಡೆಯುತ್ತಿತ್ತು.
ಅಪರೂಪಕ್ಕೆ ಪರವೂರಲ್ಲಿ ಕನ್ನಡದವರು ಸಿಕ್ಕಾಗ ಕರ್ನಾಟಕದಲ್ಲಿ ನವೆಂಬರ್ ೧ರ ಕರ್ನಾಟಕ ರಾಜ್ಯೋತ್ಸವದಂತೆ ಕನ್ನಡ, ಕನ್ನಡಿಗರ ಬಗ್ಗೆ ಪ್ರೀತಿ ಉಕ್ಕಿ ಹರಿಯುತ್ತದೆ. ಆದರೂ ನಾನು ಸುಮ್ಮನೆ ಕುಳಿತು ಅವರುಗಳ ಸಂಭಾಷಣೆ ಕೇಳುತ್ತಿದ್ದೆ.
ಆತ ಕೊಟ್ಟ ಪುಸ್ತಕದಲ್ಲಿ ಯಾವ್ದೋ ಮೇಲ್ ಐಡಿ ಇತ್ತು. ನನ್ನ ಕಾಲ ಮೇಲಿದ್ದ ಆ ಪುಸ್ತಕವನ್ನ ಇನ್ನೊಬ್ಬ ಇಣುಕಿ ನೋಡಿದ. (ಫಿಮೇಲ್ ಐಡಿ ಇರಬಹುದೇನೋ ಅಂತ)
"ಲೋ ಅದು ಅವ್ರ ಬುಕ್ ಅಲ್ಲ ಕಣೋ...ಅವ್ರ ಮೇಲ್ ಐಡಿ ಅಂತ ನೋಡ್ತಾ ಇದ್ಯಾ? ಅದು ನಂ ಸರ್‌ದು...ಈ ಬಸ್ ಚೆನ್ನಾಗಿದ್ಯಯಲ್ಲ. ಕೆಲವು ಬಸ್ ಏನು ಗಲೀಜಿರುತ್ತೆ ಮಾರಾಯ, ಯಾಕೆ ಬಸ್ ನಿಂತು ಬಿಡ್ತು?"
"ಅದೇ ಮೇಲಿಂದ ಟ್ರೇನ್ ಹೋಗ್ತಾ ಇದ್ಯಲ್ಲ!",
"ತಲೆ ನಿಂದು".
ಹೀಗೆ ಅವ್ರ ಡೈಲಾಗ್‌ಗಳು ಮುಂದುವರಿಯುತ್ತಿತ್ತು. ಕುಳಿತಲ್ಲೇ ನಂಗೆ ನಗು. ಈ ಹುಡುಗರು ನನ್ ಬಗ್ಗೆ ಇನ್ನು ಏನೆಲ್ಲಾ ಹೇಳ್ತಾರೆ ಅನ್ನೋ ಕುತೂಹಲ. ಅಷ್ಟೊತ್ತಿಗೆ ಅವರಿಗೆ ಹಿಂದೆ ಸೀಟ್ ಸಿಕ್ತು. ಆ ಹುಡುಗ ನನ್ನತ್ರ ಪುಸ್ತಕ ಕೇಳಿ "ಥ್ಯಾಂಕ್ಯೂ" ಅಂದಾಗ "ಪರವಾಗಿಲ್ಲ , ಥ್ಯಾಂಕ್ಯೂ ಎಲ್ಲ ಬೇಡ ಬಿಡಿ" ಅಂದೆ.
ನಿಂತಲ್ಲೇ ಶಾಕ್ ಕೊಟ್ಟಂಗಾಯ್ತು ಅವರಿಗೆ. "ಮೇಡಮ್ಮು ಕನ್ನಡದವ್ರಾ? ಮೊದಲೇ ಹೇಳೋದಲ್ವಾ?" ಅಂತ ಜೋರಾಗಿ ಹೇಳಿದಾಗ ಬಸ್ಸಲ್ಲಿದ್ದವರೆಲ್ಲ ನಮ್ಮತ್ತ ತಿರುಗಿ ನೋಡಿದರು.
"ಏನೇನು ಡಯಲಾಗ್ ಹೇಳ್ತೀರಾ ಅಂತ ಕೇಳ್ಕಂಡು ಮತ್ತೆ ನಿಮ್ಮತ್ರ ಮಾತಾಡುವ ಅಂತಿದ್ದೆ" ಅಂದೆ.
ಪಾಪ ಹುಡುಗರು ಐಎಸ್ ಕೋಚಿಂಗಿಗೆ ಮೈಸೂರು, ಕಾರವಾರದಿಂದ ಬಂದವರಂತೆ.

ಘಟನೆ_

ಹೀಗೇ ಇನ್ನೊಂದು ಘಟನೆ ನನಗಾಗಿತ್ತು. ಕಾಲೇಜಿಗೆ ಹೋಗುತ್ತಿದ್ದ ಸಮಯ. ನನ್ನ ಸೌಂಡ್ ಬಾಕ್ಸ್ ಒಳಗೆ ವಾಲ್ಯೂಮ್ ಸ್ವಲ್ಪ ದೊಡ್ಡದಾಗಿ ಫಿಕ್ಸ್ ಮಾಡಿದಾನೆ ಆ ಭಗವಂತ!
ಆಗ ಮಂಗಳೂರಿನಲ್ಲಿ ಮರಕಡ ಸ್ವಾಮಿಗಳ ಬಗ್ಗೆ ಏನೋ ಗುಸು ಗುಸು, ಬಿಸಿ ಬಿಸಿ ಚರ್ಚೆ ಜೋರಾಗೇ ನಡೆಯುತ್ತಿತ್ತು. ಅದನ್ನ ನನ್ನ ಮುಸ್ಲಿಂ ಗೆಳತಿಯೊಬ್ಬಳ ಹತ್ತಿರ ಹೇಳುತ್ತಿದ್ದೆ. ಆಕೆಗೆ ಮಾತ್ರವಲ್ಲ ಬಸ್ಸಲ್ಲಿದ್ದವರಿಗೆಲ್ಲ ಕೇಳುವಷ್ಟು ಜೋರಾಗಿ ಸ್ಪಿರಿಟ್ಟಲ್ಲಿ ಹೇಳುತ್ತಿದ್ದೆ. ಅದರ ಜೊತೆ ಒಡಿಯೂರು ಸ್ವಾಮಿಗಳು ಮರದ ಗೆಲ್ಲಿನಲ್ಲಿ ಮಂಗನಂತೆ ಹಾರಾಡುವುದನ್ನು (ಸ್ವತಃ ನಾನು ನೋಡಿಲ್ಲ. ನೋಡಿದವರು ಹೇಳಿದ್ದನ್ನು ಕೇಳಿದ್ದೇನೆ.) ಅವರ ಬಗೆಗಿನ ಊಹಾಪೋಹವನ್ನೆಲ್ಲ ನನಗೆ ಗೊತ್ತಿದ್ದ ಪಾಂಡಿತ್ಯವನ್ನು ಆಕೆಯ ಎದುರು ಪ್ರದರ್ಶಿಸುತ್ತಿದ್ದೆ. ಪ್ರಪಂಚದ ಗೊಡವೆಯೂ ಇಲ್ಲದೆ!
ಇದ್ದಕ್ಕಿದ್ದಂತೆ ನನ್ನ ಪಕ್ಕದ ಸೀಟಿನಲ್ಲಿ ಕುಳಿತ ಸುಮಾರು ೫೦ ವರ್ಷದ ಹೆಂಗಸೊಬ್ಬಳು "ಸ್ವಾಮಿಗಳ ಬಗ್ಗೆ ನಿಮಗೇನು ಗೊತ್ತು? ಅವ್ರ ಬಗ್ಗೆ ಹಾಗೆಲ್ಲ ಮಾತನಾಡಬೇಡಿ, ನಾವು ಅವರ ಭಕ್ತರು" ಅನ್ನಬೇಕೆ?
ನನ್ನ ಎದೆ ದಸಕ್ ಎಂದಿತು. ಕುಳಿತಲ್ಲೆ ಮೈ ಬಿಸಿಯಾಯಿತು. ಆಕೆ ಬಸ್ಸಲ್ಲಿದ್ದವರೆಲ್ಲರೆದುರು ನನ್ನ ಮೇಲೆ ಎಗರಾಡಿದರೆ? ನನ್ನತ್ರ ಎದುರುತ್ತರ ಕೊಡುವಷ್ಟು ಪಾಂಡಿತ್ಯವೂ ಇಲ್ಲ, ಧೈರ್ಯವೂ ಇಲ್ಲ. ನನ್ನ ಪುಣ್ಯಕ್ಕೆ ಹಾಗೇನೂ ಆಗಿಲ್ಲ.

ಘಟನೆ_೩

ನನ್ನ ಅತ್ತೆಗೂ ಹೀಗೇ ಆಗಿತ್ತಂತೆ. ಅಜ್ಜಿ ಮನೆಗೆ ಹೋದಾಗ ನಾವೆಲ್ಲ ನೆಂಟರು ಸೇರಿರುವಾಗ ಹಳೆಯ ಘಟನೆಗಳ ಕುರಿತು ಮೆಲುಕು ಹಾಕುವ ಪದ್ದತಿ.
ನನ್ನ ಸೋದರಮಾವನಿಗೆ ಪುತ್ತೂರಿನಲ್ಲಿ "ಕಲ್ಪವೃಕ್ಷ" ಅನ್ನುವ ಐಸ್ ಕ್ರೀಮ್ ಪಾರ್ಲರ್ ಇತ್ತು. ನಾನು ಸಣ್ಣದಿರುವಾಗ ಪುತ್ತೂರಿಗೆ ಹೋದರೆ ಖಾಯಂ ಮಾವನ ಅಂಗಡಿಯಲ್ಲಿ ಪುಕ್ಕಟೆ ಗಡ್‌ಬಡ್. ನನ್ನಂತವರು ಪುಕ್ಕಟೆ ತಿಂದು ತಿಂದು ಲಾಸ್ ಆಗಿ ಐಸ್ ಕ್ರೀಮ್ ಜೊತೆ ಅಂಗಡಿಯೂ ಕರಗಿ ಹೋಯಿತೋ? ಗೊತ್ತಿಲ್ಲ.
ಅತ್ತೆ ಕ್ಯಾಶಿಯರ್ ಕುರ್ಚಿಯಲ್ಲಿ ಕುಳಿತಿದ್ದ ದಿನ ನಾಲ್ಕೈದು ಹುಡುಗರು ಐಸ್ ಕ್ರೀಮ್ ತಿನ್ನುತ್ತಾ ಅತ್ತೆಯ ಜೊತೆ ಮಾತನಾಡಲು ತೊಡಗಿದರಂತೆ. ವಿಶಯ ಎಲ್ಲೆಲ್ಲೋ ಸುತ್ತಾಡಿ ಕೊನೆಗೆ ಧರ್ಮದ ಬಗ್ಗೆ ತಿರುಗಿತಂತೆ.
"ಮುಸ್ಲಿಂ ಜನರೇ ಮೋಸ, ಅವರ ವರ್ತನೆಯೇ ವಿಚಿತ್ರ, ಯಾರನ್ನು ನಂಬಿದರೂ ಅವರನ್ನು ನಂಬಬಾರದು" ಅಂತೆಲ್ಲಾ ಅತ್ತೆಯ ಭಾಷಣ.
ಅವರೆಲ್ಲಾ ಇಸ್ ಕ್ರೀಮ್ ತಿಂದು ದುಡ್ಡು ಕೊಡುವಾಗ "ಅಕ್ಕ ನಾವೂ ನೀವು ಬೈದ ಜಾತಿಗೇ ಸೇರಿದವರು." ಅಂದಾಗ ಅತ್ತೆ ಸುಸ್ತಂತೆ!
ಅದಕ್ಕೇ ಸಾರ್ವಜನಿಕ ಸ್ಥಳಗಳಲ್ಲಿ ಯಾರನ್ನೂ ದೂರುವ ವಿಶಯ ಮಾತಾಡಬೇಡಿ. ಮಾತನಾಡಿದರೂ ಹೊಗಳುವ ವಿಶಯ ಮಾತಾಡಿ.

No comments: