18 May, 2009

ಕತೆ ಫೋಟೋಗ್ರಾಫ್ ಇದ್ದಹಾಗೆ, ಕಾದಂಬರಿ ವೀಡಿಯೋ ಇದ್ದಹಾಗೆ_ ಎಂದ ಬರಹಗಾರ

1. ನಿಮ್ಮ ಪ್ರಕಾರ ಕತೆ ಅಂದರೇನು? ಕತೆ ಹುಟ್ಟುವ ಕ್ಷಣ ಯಾವುದು?
_ ಕತೆ ಅಂದರೆ ಬದುಕು, ಪ್ರೀತಿಸುವ ಕ್ರಮ, ಬದುಕುವ ರೀತಿ, ಅರ್ಥವಾಗದೇ ಇರುವುದನ್ನು ಅರ್ಥಮಾಡಿಕೊಳ್ಳವ ವಿಧಾನ. ಬದುಕು ಸಾಮಾನ್ಯವಾಗಿ ವರದಿಗಳಲ್ಲಿ ತೆರೆದುಕೊಳ್ಳತ್ತದೆ. ಅಲ್ಲಿ ಹೀಗಾಯಿತು, ಇಂಥ ಸಂಗತಿ ನಡೆಯಿತು ಎಂದು ನಾವು ಪರಿಚಿತರ ಬಳಿ ಹೇಳಿಕೊಳ್ಳತ್ತೇವೆ. ನಾನು ಚೆನ್ನಾಗಿದ್ದೇನೆ, ಮದುವೆಯಾಯ್ತು. ಮೂರು ಮಕ್ಕಳು, ಮೊದಲನೆ ಮಗಳಿಗೆ ನಾಡಿದ್ದು ಮದುವೆ ಎಂದು ನಮ್ಮ ಸಂಪರ್ಕದಲ್ಲಿರುವ ಮಂದಿಗೆ ಹೇಳುತ್ತೇವೆ. ಅದು ಕೂಡ ವರದಿಯೇ. ಆದರೆ ಅದರ ಹಿಂದಿನ ತುಮುಲ, ತಲ್ಲಣಗಳನ್ನು ಸಂತೋಷ ಮತ್ತು ಉಲ್ಲಾಸಗಳನ್ನು ನಾವು ತೀರಾ ಆತ್ಮೀಯರ ಜೊತೆಗಷ್ಟೆ ಹಂಚಿಕೊಳ್ಳತ್ತೇವೆ. ಆಪ್ತರಿಗಷ್ಟೇ ಅದು ದಾಟಿಕೊಳ್ಳತ್ತದೆ.
ಕತೆಯೆಂದರೆ ಅಂತದ್ದೊಂದು ಸಂತೋಷವನ್ನು, ನೋವನ್ನು ಒಳಗುದಿಯನ್ನು ಎಲ್ಲರಿಗೂ ದಾಟಿಸುವ ರೀತಿ. ಅದು ಕಲೆಯಾದಾಗ ಅಲ್ಲಿ ನಾವು ಮಾಯವಾಗಿ ಓದುಗ ತನ್ನನ್ನು ತಾನು ಕಂಡುಕೊಳ್ಳತ್ತಾನೆ. ನನಗೂ ನನ್ನ ಹೆಂಡತಿಗೂ ಜಗಳವಾಯಿತು ಅಂದರೆ ಅದು ಮಾಮೂಲು ಸಂಗತಿ. ರುದ್ರಪಟ್ಟಣದ ಶರಶ್ಚಂದ್ರನೂ ಅವನ ಹೆಂಡತಿ ಮನೋರಮೆಯೂ ಅವತ್ತು ಬೆಳ್ಳಂಬೆಳಗ್ಗೆ ಶರಂಪರ ಬೈದಾಡಿಕೊಂಡರು ಎಂದರೆ ಅದು ಕತೆ.
ಕತೆ ಹುಟ್ಟುವ ಕ್ಷಣದ ಬಗ್ಗೆ ನನಗೆ ಗೊತ್ತಿಲ್ಲ. ಸುಮ್ಮನಿದ್ದಾಗಲೊ ತುಂಬ ಬಿಜಿಯಾಗಿದ್ದಾಗಲೊ ಮನಸ್ಸಿಗೆ ಸಾಲು ಹೊಳೆಯುತ್ತದೆ. ಎಂದೋ ಕಂಡದ್ದು, ಅರ್ಥಮಾಡಿಕೊಳ್ಳಲಾಗದೇ ಇದ್ದದ್ದು ಮನಸ್ಸಿನ ಮುಂದೆ ಪ್ರತ್ಯಕ್ಷವಾಗುತ್ತದೆ. ಅದು ಹಾಗಾಗದೇ ಇರಬಹುದು. ಸುಮ್ಮನೆ ಕೂತು ಏಕಾಂತವನ್ನು ಆನಂದಿಸುವುದಕ್ಕೆಂದೂ ನಾನು ಬರೆದದ್ದಿದೆ. ಅದಕ್ಕೊಂದು ಕ್ಷಣ ಬೇಕೆಂದು ನನಗನಿಸಿಲ್ಲ.
2. ಸಣ್ಣಕತೆ ಮತ್ತು ಕದಂಬರಿ ಇವುಗಳ ನಡುವಿನ ವ್ಯತ್ಯಾಸವೆನು? ನಿಮ್ಮ ಬರವಣಿಗೆಯ ಹಿನ್ನೆಲೆಯಿಂದ ಹೇಳಿ.
_ ನನ್ನ ಪ್ರಕಾರ ಸಣ್ಣಕತೆ ಮತ್ತು ಕಾದಂಬರಿಗೆ ಅಂತ ವ್ಯತ್ಯಾಸವೇನೂ ಇಲ್ಲ. ಒಂದು ಕ್ಷಣಭಂಗುರವನ್ನು ಹಿಡಿದಿಡುತ್ತದೆ. ಇನ್ನೊಂದು ಅನಂತದತ್ತ ಕೈಚಾಚುತ್ತದೆ. ಕತೆ ಫೋಟೋಗ್ರಾಫ್ ಇದ್ದ ಹಾಗೆ, ಕಾದಂಬರಿ ವೀಡಿಯೋ ಇದ್ದ ಹಾಗೆ. ನನ್ನ ಕತೆಗಳಲ್ಲಿ ಕಾದಂಬರಿಯ ಛಾಯೆ, ಕಾದಂಬರಿಯಲ್ಲಿ ಕತೆಯ ಕ್ಷಣಿಕತೆ ಕಾಣಿಸೀತು. ನಾನು ಕತೆಯೆಂದು ಆರಂಭಿಸಿದ್ದು ಕಾದಂಬರಿಯಾದದ್ದೂ ಇದೆ, ಕಾದಂಬರಿ ಬರೆಯಬೇಕೆಂದುಕೊಂಡದ್ದು ಕತೆಯಾಗಿ ಮುಗಿದದ್ದೂ ಇದೆ.
3. ನೀವು ಮೆಚ್ಚುವ ಕತೆಗಾರ ಯಾರು? ಯಾಕೆ?
_ ನಾನು ತುಂಬ ಮೆಚ್ಚುವ ಕತೆಗಾರ ಲಂಕೇಶ್. ಅವರು ಸುಮ್ಮನೆ ಕತೆಗಳನ್ನು ಹೇಳತ್ತಾ ಹೋದರು. ಅವರ ಉಮಾಪತಿಯ ಸ್ಕಾಲರ್ ಶಿಪ್ ಯಾತ್ರೆ, ಗಿಳಿಯು ಪಂಜರದೊಳಿಲ್ಲ, ನಾನಲ್ಲ, ಒಂದು ಬಾಗಿಲು, ಕಲ್ಲು ಕರಗುವ ಸಮಯ ಮುಂತಾದ ಕತೆಗಳಲ್ಲಿ ಏನನ್ನೂ ಹೇಳದೆ ಎಲ್ಲವನ್ನೂ ಒಳಗೊಳ್ಳತ್ತಾರೆ. ಅವರಷ್ಟೇ ನಾನು ಮೆಚ್ಚುವ ಮತ್ತೊಬ್ಬ ಕತೆಗಾರ ತೇಜಸ್ವಿ, ಅವರು ಕೂಡ ಭಾರವಿಲ್ಲದೆ ಕತೆ ಹೇಳುತ್ತಾರೆ, ಲವಲವಿಕೆಯಿಂದ ಹೇಳತ್ತಾರೆ. ಇಂಥದ್ದೇ ಹೇಳಬೇಕೆಂಬ ಪೂರ್ವಾಗ್ರಹವಿಲ್ಲದೆ ಹೇಳತ್ತಾರೆ. ಹಾಗೆ ಹೇಳವುದೇ ನನಗಿಷ್ಟ.
4. ನೀವು ಮೆಚ್ಚುವ ಕಾದಂಬರಿಕಾರ ಯಾರು?
_ ಕಾದಂಬರಿಕಾರರ ಪೈಕಿ ನನಗೆ ಕುವೆಂಪು ಅಚ್ಚುಮೆಚ್ಚು. ಅವರ ಕಾನೂರ ಹೆಗ್ಗಡತಿ ನನಗೆ ಆಲ್ ಟೈಮ್ ಫೇವರೇಟ್. ಕಾನೂರ ಹೆಗ್ಗಡತಿ ನನ್ನನ್ನು ಮತ್ತೊಂದು ಬದುಕಿಗೆ ಪರಿಚಯಿಸಿದ ಕೃತಿ. ಅದು ಅಚ್ಚಗನ್ನಡದ ಕಾದಂಬರಿ ಎಂಬ ಕಾರಣಕ್ಕೂ ನನಗಿಷ್ಟ. ಹಾಗೇ ಬೌದ್ಧಿಕ ಕಾರಣಕ್ಕೆ ನನಗೆ ಅನಂತಮೂರ್ತಿ ಇಷ್ಟ. ಅವರ ಅವಸ್ಥೆ ಕಾದಂಬರಿಯನ್ನು ನಾನು ಮತ್ತೆ ಮತ್ತೆ ಓದಿ ಸಂತೋಷಪಟ್ಟಿದ್ದೇನೆ. ಈಗ ಥಟ್ಟನೆ ಹೇಳಿದಾಗ ಹೊಳೆಯುವ ಮತ್ತೊಂದು ಕಾದಂಬರಿ ಕರ್ವಾಲೋ. ಅದು ಅಪೂರ್ವ ಪಾತ್ರ ಸೃಷ್ಟಿಗೆ ಸಾಕ್ಷಿ.

5. ಸಾಹಿತಿಗೆ ಸಾಮಾಜಿಕ ಜವಾಬ್ದಾರಿ ಇದೆಯೇ?
_ ಸಾಮಾಜಿಕ ಜವಾಬ್ದಾರಿ ಯಾರಿಗಿಲ್ಲ. ಆದರೆ ಆ ಹೆಸರೇಕೋ ನನಗೆ ಅಲರ್ಜಿ. ಸಮಾಜದಲ್ಲಿ ಬದುಕುವ ಎಲ್ಲರೂ ಎಲ್ಲರ ಸಂತೋಷಕ್ಕೂ ಜವಾಬ್ದಾರರೇ. ಸಾಹಿತಿಗಳು ತಾವೇನೋ ಮಹಾ ವ್ಯಕ್ತಿಗಳು ಎಂದು ಭಾವಿಸಬೇಕಿಲ್ಲ. ಉಳಿದವರಷ್ಟೇ ಅವರೂ ಬಾಧ್ಯರು. ಅವರಿಗೆ ಬರೆಯುವ ಶಕ್ತಿ ಇದೆ, ಬರೆಯುತ್ತಾರೆ. ಹೀಗಾಗಿ ಅವರ ಅಭಿಪ್ರಾಯಗಳು ಎಲ್ಲರನ್ನೂ ತಲಪುತ್ತವೆ, ಅಷ್ಟೇ ವ್ಯತ್ಯಾಸ.

6. ವರ್ತಮಾನದ ಸಾಹಿತ್ಯದ ಗತಿ ಹೇಗಿದೆ? ಅದರ ಗುಣಮಟ್ಟ ಯಾವ ರೀತಿಯಲ್ಲಿದೆ? ಓದುಗರಿಗೆ ಹೇಗೆ ತಲುಪುತ್ತಿದೆ?
_ ನನ್ನ ಪ್ರಕಾರ ರಂಜನೆಗಾಗಿ ಸಾಹಿತ್ಯ, ನೆಮ್ಮದಿಗಾಗಿ ಸಾಹಿತ್ಯ, ಬದಲಾವಣೆಗಾಗಿ ಸಾಹಿತ್ಯ ಎಂಬ ಮೂರು ವರ್ಗಗಳಿವೆ. ಈ ಮೂರೂ ಮುಖ್ಯವೇ, ನಾನು ಮೂರನ್ನೂ ಮೆಚ್ಚುತ್ತೇನೆ. ಆದರೆ ನಾನೀಗ ಓದುವುದು ನೆಮ್ಮದಿಗಾಗಿ. ಮನಸ್ಸನ್ನು ಹದಗೊಳಿಸುವುದಕ್ಕಾಗಿ. ಚಕಿತಗೊಳಿಸುವ, ಬೆರಗಾಗಿಸುವ ಕೌತುಕವನ್ನು ಉಳಿಸುವ ಸಾಹಿತ್ಯ ನಂಗಿಷ್ಟ. ಅದೇ ಕಾರಣಕ್ಕೆ ತೇಜಸ್ವಿ ಮೆಚ್ಚುಗೆಯಾಗುತ್ತಾರೆ.
ರಂಜನೆಗಾಗಿ ಓದಿದವರ ಪೈಕಿ ಟಿ.ಕೆ. ರಾಮರಾವ್ ಅಚ್ಚುಮೆಚ್ಚು. ಪರಿವರ್ತನೆಯ ಹಾದಿಯನ್ನು ಕ್ರಮಿಸಿದವರ ಪೈಕಿ ನಮ್ಮ ವಚನಕಾರರು ಮತ್ತು ಈ ಕಾಲದ ದೇವನೂರು ಮಹಾದೇವ, ತುಂಬಾಡಿ ರಾಮಯ್ಯ, ಸಿದ್ಧಲಿಂಗಯ್ಯ, ಬರಗೂರು ರಾಮಚಂದ್ರಪ್ಪ ಮುಂತಾದವರಿ ಇಷ್ಟ.
ಈಗಲೂ ನಾನು ನೆಮ್ಮದಿಗಾಗಿ ಓದುವುದು ವಿವೇಕ ಶಾನುಭಾಗ, ಸತ್ಯನಾರಾಯಣ, ಜಯಂತ ಕಾಯ್ಕಿಣಿ ಮುಂತಾದವರನ್ನು.

7. ಬಂಡವಾಳಶಾಹಿಯ ಇವತ್ತಿನ ಸಮಾಜದಲ್ಲಿ ಸಾಹಿತಿಯ ಪಾತ್ರವೇನು?
_ ಆರ್ಥಿಕ ಬದಲಾವಣೆಗೂ ಸಾಹಿತ್ಯಕ್ಕೂ ಸಂಬಂಧವಿಲ್ಲ. ಅಂಥ ಚಳವಳಿಗಳನ್ನೆಲ್ಲ ಸಾಹಿತ್ಯದಲ್ಲಿ ತರಲು ಹೊರಟರೆ ಸಾಹಿತ್ಯ ಪ್ರಣಾಳಿಕೆಯಾಗುತ್ತದೆ. ಸಾಹಿತ್ಯ ಯಾವುದನ್ನು ಅಂಟಿಸಿಕೊಳ್ಳದೆ ಎಲ್ಲವನ್ನು ಒಳಗೊಂಡಿರಬೇಕು. ವಿವೇಕ ಶಾನುಭಾಗರ ‘ಹುಲಿ ಸವಾರಿ’ ಕತೆಯಂತಿರಬೇಕು. ತೇಜಸ್ವಿಯವರ ‘ಕರ್ವಾಲೋ’ ಕಾದಂಬರಿಯಲ್ಲಿ ಮಂದಣ್ಣ ಮತ್ತು ಕರ್ವಾಲೋ ಎಂಬ ಎರಡು ಪಾತ್ರಗಳಿವೆ. ಈ ಪಾತ್ರಗಳನ್ನು ಎದುರು ಬದುರು ನಿಲ್ಲಿಸಿದಾಗ ನಿಚ್ಚಳವಾಗುವ ಜಗತ್ತು ಸಾಹಿತ್ಯದಲ್ಲಿ ಮಾತ್ರ ಸಾಧ್ಯ ಎಂಬ ನಂಬಿಕೆ.

8. ಮಾಧ್ಯಮಗಳ ಮೇಲೆ ನಿಯಂತ್ರಣ ಬೇಕಾ?
_ ಮಾಧ್ಯಮದ ಮೇಲೆ ನಿಯಂತ್ರಣ ಇರಬೇಕು ಎಂದು ಎಷ್ಟೋ ಬಾರಿ ಅನಿಸುತ್ತದೆ. ವ್ಯಕ್ತಿಗಳ ಖಾಸಗಿ ಬದುಕನ್ನು ಬಹಿರಂಗವಾಗಿಸುವ ರೀತಿ ಆಕ್ಷೇಪಣೀಯ. ಒಬ್ಬ ವ್ಯಕ್ತಿಯ ಅವಮಾನದ ಕ್ಷಣವನ್ನು, ಸಂಕಟವನ್ನು ಮಾಧ್ಯಮ ಪ್ರತಿಬಿಂಬಿಸಬಾರದು. ಅದು ಕಲೆ ಮತ್ತು ಸಾಹಿತ್ಯದ ಕೆಲಸ. ಹೆಂಡತಿ ಸುಟ್ಟು ಸತ್ತಾಗ, ಮಗ ಯುದ್ಧದಲ್ಲಿ ಸತ್ತಾಗ ನಿಮಗೇನನ್ನಿಸುತ್ತದೆ ಎಂದು ಕೇಳುವುದು ಅಮಾನವೀಯ. ಕಲೆಗಿರುವ ಮಾನವೀಯ ಗುಣವನ್ನು ಮಾಧ್ಯಮ ಕಳಕೊಂಡಿದೆ.

9. ದೃಶ್ಯ ಮಾಧ್ಯಮದಲ್ಲಿ ತಾವು ಮಾಡಿದ ಕೆಲಸಗಳ ವಿವರ?
_ ನಾನು ಒಂದಷ್ಟು ಸೀರಿಯಲ್ಲುಗಳಿಗೆ ಕತೆ, ಚಿತ್ರಕತೆ, ಸಂಭಾಷಣೆ ಬರೆದಿದ್ದೇನೆ. ಮೂರು ಸಿನೆಮಾಗಳಿಗೆ ಕೆಲಸ ಮಾಡಿದ್ದೇನೆ. ನಾನು ಚಿತ್ರಕತೆ, ಸಂಭಾಷಣೆಬರೆದ ಮೊದಲ ಟಿವಿ ಧಾರಾವಾಹಿ ಶಿಕಾರಿ. ಕತೆ, ಚಿತ್ರಕತೆ, ಸಂಭಾಷಣೆ ಬರೆದ ಧಾರಾವಾಹಿ ಸುಮಾರಿ ಇಪ್ಪತ್ತು. ಅವುಗಳಲ್ಲಿ ಜನಪ್ರಿಯವಾದವು ಗುಪ್ತಗಾಮಿನಿ, ಪ್ರೀತಿ ಇಲ್ಲದ ಮೇಲೆ, ಬಂದೇ ಬರುತಾವ ಕಾಲ, ಮನೆಯೊಂದು ಮೂರು ಬಾಗಿಲು, ಶರಪಂಜರ, ಭೆಳ್ಳಿ ತೆರೆ, ಕಲ್ಯಾಣಿ, ಯಜ್ಞಕುಂಡ...
ಸಿನೆಮಾಗಳು ಅನಂತಮೂರ್ತಿ ಕತೆ ಆಧರಿಸಿದ ಮೌನಿ, ಕಾಡ ಬೆಳದಿಂಗಳು, ಕೇರಾಫ್ ಫುಟ್‌ಪಾತ್
10. ದೃಶ್ಯ ಮಾಧ್ಯಮದ ಬಗೆಗೆ ಸೆಳೆತ ಬೆಳೆಯಲಿ ಕಾರಣ?
_ ಟಿವಿ ಧೃಶ್ಯ ಮಾಧ್ಯಮಕ್ಕೆ ಸೆಳೆತ ಮುಖ್ಯವಾಗಿ ಹಣ ಮತ್ತು ಗೆಳೆಯರ ಓತ್ತಾಯ. ಇವತ್ತಿಗು ಅದನ್ನು ನಾನು ಸಾಹಿತ್ಯಕ ಕ್ರಿಯೆ ಎಂದು ಭಾವಿಸಿಲ್ಲ. ಅದೊಂದು ಗುಮಾಸ್ತಗಿರಿ ಅಷ್ಟೇ. ಸಿನೆಮಾ ಸಾಹಿತ್ಯದ ಹಾಗೇ ಕಲಾ ಮಾಧ್ಯಮ. ಅದು ನನಗೆ ಖುಶಿಕೊಟ್ಟಿದೆ.

11. ದೃಶ್ಯ ಮಾಧ್ಯಮದ ಸಾಧ್ಯತೆ ಮತ್ತು ಸವಾಲುಗಳೇನು?
_ ದೃಶ್ಯ ಮಾಧ್ಯಮವೇ ಇವತ್ತಿನ ಪ್ರಭಾವೀ ಮಾಧ್ಯಮ. ಅದರ ಮೂಲಕ ಹೇಳುವಷ್ಟು ಸಮರ್ಥವಾಗಿ ಬೇರೆ ಯಾವ ಮಧ್ಯಮಗಳಲ್ಲಿ ಹೇಳುವುದು ಕಷ್ಟ. ಹೇಳಲು ಸಾಧ್ಯವಾದರೂ ಬೇರೆ ಮಾಧ್ಯಮ ಕೆಲವೇ ಮಂದಿಗೆ ತಲುಪುತ್ತದೆ. ಒಂದು ಕತೆಯನ್ನೋ ಕಾದಂಬರಿಯನ್ನೋ ಹತ್ತು ಸಾವಿರ ಮಂದಿ ಓದಬಹುದು. ಸಿನೆಮಾ ಆದಾಗ ಲಕ್ಷಾಂತರ ಮಂದಿ ನೋಡುತ್ತಾರೆ.
ದೃಶ್ಯ ಮಾಧ್ಯಮದ ಮುಂದಿರುವ ಸವಾಲೆಂದರೆ ಆರ್ಥಿಕತೆ. ಅದು ತನ್ನನ್ನು ತಾನು ಸಮಭಾಳಿಸಿಕೊಳ್ಳುವಷ್ಟು ಸಮರ್ಥವಾಗಿರಬೇಕು.

12. ಬರವಣಿಗೆಯ ಬೆಳವಣಿಗೆಯಲ್ಲಿ ಅಂತರ್ಜಾಲದ ಪಾತ್ರವೇನು?
_ ಅಂತರ್ಜಾಲ ಬರಹಗಾರದಲ್ಲದವರನ್ನೂ ಬರಹಗಾರರನ್ನಾಗಿಸಿತು. ಆದರೆ ಬರೆದದ್ದು ಬೇಗ ಎಲ್ಲರನ್ನೂ ತಲಪುವಂತೆ ಮಾಡಿತು. ಆದರೆ ಬರಹದ ಆಯುಸ್ಸನ್ನು ಕಡಿಮೆ ಮಾಡಿತು. ಓದು ಮರೆಯುವಂತೆ ಮಾಡಿದ್ದರಲ್ಲಿ ಅಂತರ್ಜಾಲದ ಪಾತ್ರ ದೊಡ್ಡದು. ಅದು ಅಕ್ಷರ ಲೋಕವನ್ನು ಬೆಳೆಸಿದಷ್ಟು ಅಳಿಸಲೂ ಕಾರಣವಾಗಿರಬಹುದು.

13. ನಿಮ್ಮ ಬರವಣಿಗೆಯ ತಾತ್ವಿಕತೆಯೇನು?
_ ತಾತ್ವಿಕತೆಯ ಬಗ್ಗೆ ನನಗೆ ನಂಬಿಕೆ ಇಲ್ಲ.

14. ನೀವು ಕಂಡುಕೊಂಡಂತೆ ನಿಮ್ಮ ಅನನ್ಯತೆಯೇನು?
_ ಗೊತ್ತಿಲ್ಲ. ಅದನ್ನು ನೀವೇ ಹೇಳಬೇಕು. ನಾನು ಖುಶಿಯಲ್ಲಿದ್ದಾಗ ಬರೆಯುತ್ತೇನೆ. ಅದು ನನ್ನ ನೋವಿನ, ಧ್ಯಾನಸ್ಥ ಸ್ಥಿತಿಯ ಪ್ರತಿಬಿಂಬವಲ್ಲ. ಅಂಥದ್ದರಲ್ಲಿ ನನಗೆ ನಂಬಕೆ ಇಲ್ಲ.

*********************************

ಸಂದರ್ಶನ ಒಂದೂ ಅರ್ಥವಾಗುತ್ತಿಲ್ಲ ಎಂದು ಚಿಂತಿಸುತ್ತಿದ್ದೀರಾ? ಖಂಡಿತಾ ಹೇಳುತ್ತೇನೆ. ಇನ್ನು ತಡ ಮಾಡಲಾರೆ. ಕನ್ನಡದಲ್ಲಿ ೪ ಕಾದಂಬರಿ, ೪ ಕಥಾ ಸಂಕಲನ ಹಾಗೂ ಅಂಕಣ ಬರಹದ ಪುಸ್ತಕಗಳನ್ನು ಬರೆದವರು. ಅದಕ್ಕಿಂತಲೂ ಹೆಚ್ಚಾಗಿ ತುಂಬ ಆಪ್ತವಾಗಿ ಧಾರಾವಾಹಿಗಳಿಗೆ ಸಂಭಾಷಣೆ ಬರೆಯುವ, ಬ್ಲಾಗ್ ಲೋಕದಲ್ಲಿ ನಿಮಗೆಲ್ಲ ತುಂಬ ಸುಪರಿಚಿತರಾದ ಜೋಗಿಯವರು.
ಇದಕ್ಕೂ ಮೊದಲ ಬರಹದಲ್ಲಿ ನಾನು ಹೇಳಿದ್ದೆ. ಎಂಫಿಲ್‌ಗಾಗಿ ನಾನು ಜೋಗಿಯವರ ಕತೆ, ಕಾದಂಬರಿಗಳ ಕುರಿತ ಹಾಗೆ ಅಧ್ಯಯನ ಮಾಡಿದ್ದೆ ಎಂದು. ಹಾಗೆ ಕೆಲವು ಪ್ರಶ್ನೆಗಳನ್ನೂ ಜೋಗಿಯವರಲ್ಲಿ ಕೇಳಿದ್ದೆ. ಅವರು ನೀಡಿದ ಉತ್ತರ ನನಗಂತೂ ಇಷ್ಟವಾಗಿತ್ತು. ನಿಮಗೂ ಖುಶಿ ನೀಡಬಹುದೆಂಬ ನಂಬಿಕೆಯಿಂದ ಬ್ಲಾಗಿನಲ್ಲಿ ಹಾಕಿದೆ.
ಈ ವಿಷಯವನ್ನು ಆರಂಭದಲ್ಲೇ ಹೇಳಿದ್ದರೆ ನಾನು ಕೇಳಿದ ಪ್ರಶ್ನೆ ಅವರು ನೀಡಿದ ಉತ್ತರ ಎರಡನ್ನೂ ನೀವು ಓದದೇ ಇರಬಹುದೆಂಬ ಭಯದಿಂದ ಹಾಗೂ ತುಸು ಭಿನ್ನವಾಗಿರಲೆಂದು ಕೊನೆಗೆ ಹೇಳಿದೆ.
ಅಂದ ಹಾಗೆ ನಾನು ನನ್ನ ಪ್ರಬಂಧವನ್ನು ಲೇಟ್ ಆಗಿ ಸಬ್ಮಿಟ್ ಮಾಡಿದ್ದೆ. ಆದ ಕಾರಣ ಜೋಗಿಯವರ ಯಾಮಿನಿ, ಹಿಟ್ ವಿಕೆಟ್ ಹಾಗೂ ರಾಯಭಾಗದ ರಹಸ್ಯ ರಾತ್ರಿ ಕೃತಿಗಳನ್ನು ನನ್ನ ಅಧ್ಯಯನಕ್ಕೆ ಒಳಪಡಿಸಲಾಯಿತು. ಇನ್ನೂ ತಡ ಮಾಡಿದ್ದರೆ ಈಗ ಅವರು ಬರೆಯುತ್ತಿರುವ ಹೊಸ ಕಾದಂಬರಿ "ಚಿಟ್ಟೆ ಹೆಜ್ಜೆ ಜಾಡು"ವನ್ನೂ ಸೇರಿಸಬಹುದಿತ್ತು!!!
ಫೋಟೋ : ಅವಧಿ

2 comments:

Keshav.Kulkarni said...

ಚೆನ್ನ್ನಗಿದೆ. ಥ್ಯಾಂಕ್ಸ್.
- ಕೇಶವ

Ittigecement said...

ನಾನು ಮೆಚ್ಚುವ ಬರಹಗಾರ...ಜೋಗಿ..

ಜೋಗಿಯವರ ಸಂದರ್ಶನ...
ಅವರ ಮಾತುಗಳು..
ತುಂಬಾ ಚೆನ್ನಾಗಿ ಬಂದಿದೆ...

ಅಭಿನಂದನೆಗಳು....