27 December, 2008

ಜೀವನಕ್ಕಿಲ್ಲ ಹಣ, ಅದಕ್ಕೇ ಬೀಳುತ್ತಿದೆ ಹೆಣ!


Radish 2.50 RS/K.G.
Cauliflower- 5 RS/K.G.
Cabbage- 5 RS/K.G.
Potato- 4 RS/K.G.
Palak- 5 RS/K.G.

Sarsoka sag- 5 RS/K.G


ನಾನು ಬ್ಲಾಗ್‌ನಲ್ಲಿ ತರಕಾರಿ ಮಾರಾಟ ಮಾಡುತ್ತಿಲ್ಲ. ಅಥವಾ ತರಕಾರಿ ಅಂಗಡಿ ಇಟ್ಟು ಇಷ್ಟೊಂದು ಚೀಪ್ ರೇಟ್‌ಗೆ ತರಕಾರಿ ಕೊಡ್ತಾನೂ ಇಲ್ಲ. ಈ ಬೆಲೆಗೆ ತರಕಾರಿ ಮಾರಾಟ ಮಾಡಲು ಶುರು ಮಾಡಿದರೆ, ಮಾರಾಟ ಮಾಡುವ ಮೊದಲೇ ನಾನು ಅಂಗಡಿ ಕದ ಹಾಕಬೇಕಾಗುತ್ತದೆ ಅಷ್ಟೇ!

ಡೆಲ್ಲಿಯಲ್ಲಿ ಈ ರೇಟಿಗೆ ತರಕಾರಿ ಸಿಗ್ತಿರೋದು ಮಾತ್ರ ಸುಳ್ಳಲ್ಲ. (ಹಾಗಾದ್ರೆ ನಾಳೆನೇ ನಾವೂ ಡೆಲ್ಲಿಗೇ ಶಿಫ್ಟ್ ಆಗ್ಬಿಡ್ಬೇಕು ಅಂತ ಡಿಸೈಡ್ ಮಾಡ್ಬಿಡ್ಬೇಡಿ. ಯಾಕಂದ್ರೆ ಇಲ್ಲಿ ಅಕ್ಕಿ ರೇಟ್ ಹಕ್ಕಿ ಹಾರೋವಷ್ಟು ಎತ್ತರದಲ್ಲಿದೆ ಕಣ್ರೀ!)

ನಾವು ಆರಾಮಾಗಿ ಮಾರ್ಕೆಟ್ ಸುತ್ತಾಡ್ತಾ 'ಓ ತರಕಾರಿಗೆ ಬಹಳ ಕಡಿಮೆ ರೇಟ್, ಕೊಂಡು ಹೋದ್ರೆ ಫ್ರಿಡ್ಜ್‌ನಲ್ಲಾದ್ರೂ ಇರುತ್ತೆ' ಅಂತ ವಿಚಾರ ಮಾಡಿ ತಗೊಂಡು ಬರ್‍ತೀವಿ. ಅಡಿಗೆ ಮಾಡೋದಂತೂ ಮಾಹಾನ್ ಕಷ್ಟದ ಕೆಲಸವೇನಲ್ಲ. ಅರ್ಧ ಗಂಟೆ ಕಾರ್ಯಕ್ರಮ. ಟಿವಿ ನೋಡ್ತಾ ಊಟಾನು ಮುಗಿಯುತ್ತೆ.

ಕಡಿಮೆ ಬೆಲೆ ತರಕಾರಿ ಕೊಳ್ಳೋವಾಗ ಖುಷಿಯಾಗುತ್ತೆ. ಹಾಗೆಯೇ ಕೊಂಚ ಬೇಸರವೂ!

ಗ್ರಾಹಕನಿಗೇ ಇಷ್ಟು ಕಡಿಮೆ ಬೆಲೆಗೆ ತರಕಾರಿ ಸಿಗುವಾಗ, ಬೆಳೆದ ಕೃಷಿಕನಿಗೆ ಎಷ್ಟು ಬೆಲೆ ಸಿಕ್ಕಿರಬಹುದು? ತಿಂಗಳುಗಟ್ಟಲೆ ಗೊಬ್ಬರ, ನೀರು ಪೂರೈಸಿ, ಕೀಟ ತಿನ್ನದಂತೆ ಔಷಧಿ ಸಿಂಪಡಿಸಿದ ಖರ್ಚು ಬಿಡಿ, ಕೊನೆಪಕ್ಷ ಮೂಲಂಗಿಯನ್ನು ಅಗೆದು ತೆಗೆದು, ಸ್ವಚ್ಛಮಾಡಿ ಅಂಗಡಿಗೆ ತಲುಪಿಸಿದ ಶ್ರಮಕ್ಕಾದರೂ ಈ ಬೆಲೆ ಸಾಟಿಯೇ? (ಎಷ್ಟೋ ಗ್ರಾಹಕರಿಗೆ ಮೂಲಂಗಿ ಎಲ್ಲಿ ಬೆಳೆಯುತ್ತೆ ಅನ್ನುವುದೇ ಗೊತ್ತಿರಲಾರದು. ತಿನ್ನುವುದೊಂದು ಬಿಟ್ಟು!)

ಅದೇ ಒಬ್ಬ ಕೃಷಿಕ ಪೇಟೆಗೆ ಬಂದು ತನ್ನ ನಿತ್ಯದ ಖರ್ಚಿಗೆ ಬೇಕಾದ ವಸ್ತುಗಳನ್ನು ಕೊಂಡುಕೊಳ್ಳಬೇಕಾದರೆ ಅಂಗಡಿಯವನು ಹೇಳಿದ ಬೆಲೆ ತೆರಬೇಕು. `ನೋ ಬಾರ್ಗೇನ್, ಫಿಕ್ಸ್‌ಡ್ ರೇಟ್ಸ್' ಅಂತ ಫಲಕವನ್ನ ಆ ಚಾಣಾಕ್ಷ ಮಾಲಿಕ ಮೊದಲೇ ತೂಗಿಟ್ಟಿರು‍ತ್ತಾನೆ. ನಾವು ಚರ್ಚೆಗೆ ತೊಡಗಿದೆವೊ ಬೋರ್ಡ್ ತೋರಿಸುತ್ತಾನೆ.

ಕೀಟನಾಶಕ, ರಸಗೊಬ್ಬರದ ಬೆಲೆ ಪ್ರತಿ ವರ್ಷವೂ ಏರುತ್ತಿದೆ. ೨ ರೂ. ಒಂದು ಕೆ.ಜಿ. ಮೂಲಂಗಿ ಸಿಕ್ಕಿತೆಂದು ಖುಶಿಯಿಂದ ೪ ಕೆ.ಜಿ. ಹೊತ್ತು ತರುವ ವ್ಯಾಪಾರಿಯೂ ರೈತನಿಗೆ ರಸಗೊಬ್ಬರ ಮಾರುವಾಗ ೧ ರೂ. ರಿಯಾಯಿತಿ ನೀಡಲಾರ!

ಜಗತ್ತಿಗೆಲ್ಲ ಉಣಬಡಿಸುವ ರೈತನ ಮನೆಯಲ್ಲಿ ಒಪ್ಪೊತ್ತಿನ ಅನ್ನಕ್ಕೂ ತತ್ವಾರ!

ಇಂತಹ ರೈತ ಮಲ್ಟಿಪ್ಲೆಕ್ಸ್‌ನಲ್ಲಿ ಸಿನೆಮಾ ನೋಡೋದು, ಕಾರು ಕೊಂಡು ಸುತ್ತಾಡೋದು, ಮಸ್ಸೂರಿಗೊ, ಮುನ್ನಾರಿಗೋ ಹೆಂಡತಿ, ಮಕ್ಕಳ ಜೊತೆ ಹೋಗಬೇಕೆಂದು ಎಣಿಸುವುದು ಕನಸಲ್ಲೂ ಸಾದ್ಯವಿಲ್ಲ. ಅಥವಾ ಭಾರತದಲ್ಲಿ ಹುಟ್ಟಿದ ತಪ್ಪಿಗೆ ಆತ ಹಾಗೆ ಬಯಸುವುದೂ ತಪ್ಪೇನೋ!

ರೈತರ ಸಮಸ್ಯೆ ಒಂದಾ, ಎರಡಾ? ಕರೆಂಟಿಲ್ಲ, ನೀರಿಲ್ಲ, ಗೊಬ್ಬರಕ್ಕೆ ಮಿತಿಮೀರಿದ ಕ್ರಯ, ಸಾಲದ್ದಕ್ಕೆ ಕೃಷಿ ಮಾಡಿಸಲು, ಬೆಳೆ ಸರಿಯಾದ ಸಮಯಕ್ಕೆ ಕೊಯ್ಯಲು ಕೆಲಸಗಾರರಿಲ್ಲ. ಸಿಕ್ಕಿದರೂ ಅವರ ಸಂಬಳ ಕೊಡುವ ತಾಕತ್ತಿಲ್ಲ? ಬೆಳೆಗೆ ಬೆಲೆಯಿಲ್ಲ. ಪರಿಣಾಮ ಸಾಲದ ಹೊರೆ! ಜೀವನಕ್ಕೇ ತೊಂದರೆ, ಇನ್ನು ಆತನ ಆಸೆ, ಬಯಕೆಗಳಿಗೆ ಎಲ್ಲಿದೆ ಹಣ?

ಪರಿಣಾಮ? ಬೀಳುತ್ತಿದೆ ಆತನ ಹೆಣ!

ಅದಕ್ಕಾಗಿಯೇ ಇವತ್ತು ನಳನಳಿಸುವ ಹಸಿರು ಬಯಲು, ಗದ್ದೆ, ತೋಟಗಳಲ್ಲಿ `ಮಾರಾಟಕ್ಕಿದೆ' ಎಂಬ ಬೋರ್ಡ ಕಾಣೋದು. ಇವತ್ತು ರಿಯಲ್ ಎಸ್ಟೇಟ್ ದಂಧೆಯಿಂದಾಗಿ ಭೂಮಿಗೆ ಚಿನ್ನದಂತಾ ಬೆಲೆ. ವರ್ಷಾನುಗಟ್ಟಲೆ ಕೃಷಿಮಾಡಿ ಕಷ್ಟಪಡುವ ಬದಲು ಭೂಮಿ ಮಾರಾಟ ಮಾಡಿ ಪೇಟೆಗೆ ಬಂದು ತಾವೂ ೨.೫೦ ರೂಪಾಯಿಗೆ ಕೆ.ಜಿ. ಮೂಲಂಗಿ ತಂದು ಅಡಿಗೆ ಮಾಡ್ತಾ, ಟಿವಿ ನೋಡ್ತಾ ಇರೋದು, ತಿನ್ನೋದು ಸುಖ ಅಂತ ಕಾಣದೆ ಇರುತ್ತದೆಯೇ?

ಹಾಗನ್ನಿಸಿಯೇ ರೈತ ಭೂಮಿ ಮಾರಾಟ ಮಾಡುತ್ತಿದ್ದಾನೆ. ವಿಶೇಷ ವಿತ್ತ ವಲಯಗಳನ್ನು ವಿಶೇಷ ಆಸಕ್ತಿಯಿಂದ ಸ್ವಾಗತಿಸುತ್ತಿದ್ದಾನೆ. ಭೂಮಿ ಮಾರಾಟ ಮಾಡಿದ ಹಣದಲ್ಲಿ ಒಂದಷ್ಟು ದಿನ ಅಥವಾ ವರ್ಷ ಹಾಯಾಗಿರುತ್ತಾನೆ. ಅಥವಾ ಹಾಯಾಗಿದ್ದೇನೆ ಅಂದುಕೊಳ್ಳುತ್ತಾನೆ. ಬ್ಯಾಂಕ್ ಖಾತೆಯಲ್ಲಿನ ದುಡ್ಡು ಕರಗುತ್ತ ಬರುತ್ತದೆ. ಅದು ಖಾಲಿಯಾದಾಗ ಆತನ ಜೀವನವೂ ಖಾಲಿ!

ಹಾಗಾದರೆ ರೈತನ ಈ ಸ್ಥಿತಿಗೆ ಯಾರು ಹೊಣೆ? ದಲ್ಲಾಳಿಗಳಾ? ಗ್ರಾಹಕರಾ? ಅಥವಾ ಮಾಮೂಲಿನಂತೆ ಸರಕಾರವಾ? ಅಥವಾ ನಾವೆಲ್ಲರೂ!

2 comments:

Ittigecement said...

ನಮಗೆ ಊಟಕೊಡುವವನ ಬಗೆಗೆ ಎಲ್ಲ ರೀತಿಯಿಂದ, ಎಲ್ಲ ಕೋನಗಳಿಂದ ಅಲಕ್ಷಿಸಲ್ಪಟ್ಟಿದೆ...
ಇದರ ಪರಿಣಾಮ ..ಬಹಳ ಕೆಟ್ಟದು...
ಈಗಲೇ ಎಚ್ಚೆತ್ತು ಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ..

ಚಂದದ ಲೇಖನ..

ಅಭಿನಂದನೆಗಳು...

ನಗಿಷ್ಟವಾಯಿತು...

ಅಭಿನಂದನೆಗಳು...

ಕೆ. ರಾಘವ ಶರ್ಮ said...

ರೈತರ ಬಗೆಗಿನ ನಿಮ್ಮ ಕಾಳಜಿ ಮೆಚ್ಚತಕ್ಕದ್ದು...

ಅದಿರಲಿ..ಈಗ ನಿಮ್ಮ ಮನೆಯಲ್ಲಿ ನಮಗೆ ಮುಂದಿನ ಊಟ ಯಾವಾಗ?

ತರಕಾರಿ ಬೇಕಾದ್ರೆ ನಾನೇ ತರ್ತೇನೆ.. :)