01 March, 2009

ಸರ್ಕಸ್ ನೋಡಿ ತಲೆ ಹಾಳಾಗಿ...

ಕ್ಷಮಿಸಿ, ಇಷ್ಟು ತಡವಾಗಿ ಕನ್ನಡದ ಸರ್ಕಸ್ ಸಿನೆಮಾದ ಬಗ್ಗೆ ಬರೆಯುತ್ತಿರುವುದಕ್ಕೆ ಜೊತೆಗೆ ಬೈಯುತ್ತಿರುವುದಕ್ಕೆ!
ಖಂಡಿತವಾಗಿಯೂ ಆ ಸಿನೆಮಾದ ಡೈರೆಕ್ಟರ್ ದಯಾಲ್ ಪದ್ಮನಾಭನ್, ಪ್ರೊಡ್ಯೂಸರ್, ಗೊಲ್ಡನ್ ಸ್ಟಾರ್ ಗಣೇಶ್ ಯಾರನ್ನೂ ಕ್ಷಮಿಸೊಲ್ಲ. ಅಷ್ಟಕ್ಕೂ ಕ್ಷಮಿಸೋಕ್ಕೆ ನಾನು ಯಾರು ಅಂತ ಕೇಳಬೇಡಿ! ಗಣೇಶ್ ಬಗ್ಗೆ ಇದ್ದ ಸಣ್ಣ ಅಭಿಮಾನವೂ ಇಲ್ಲದಾಯಿತು.
ಸತ್ಯಕ್ಕೂ ಈ ಸಿನೆಮಾ ತಯಾರಿಸಿದ ಉದ್ದೇಶವೇನು ನನಗಂತೂ ಅರ್ಥವಾಗಿಲ್ಲ. ನಿಮಗೇನಾದರೂ ಅರ್ಥವಾದರೆ ತಿಳಿಸಿ.
ಸಿನೆಮಾ ನೋಡಿ ಪ್ರೇಕ್ಷಕರ ಮನಸ್ಸು ಉಲ್ಲಾಸದಾಯಕವಾಗಬೇಕು ಇಲ್ಲವೇ ಮನ ಕಾಡುವಂತಿರಬೇಕು, ಸಿನೆಮಾ ನೋಡಿದ ತ್ರಪ್ತಿಯಾದರೂ ಸಿಗಬೇಕು ಅದು ಬಿಟ್ಟು ಸಿನೆಮಾ ನೋಡಿ ತಲೆ ಹಾಳಾಗುವಂತಿದ್ದರೆ?
ಜೀವನದಲ್ಲಿ ಅದೆಷ್ಟೋ ಸಮಯವನ್ನು ನಿದ್ದೆ ಮಾಡಿಯೋ, ಕಾಡು ಹರಟೆ ಹೊಡೆದೂ ವ್ಯರ್ಥ ಮಾಡಿದ್ದೇನೆ. ಅದಕ್ಕೆ ಅಂಥಾ ಬೇಸರವೇನೂ ಇಲ್ಲ. ಆದರೆ ಸರ್ಕಸ್ ಸಿನೆಮಾ ನೋಡಿ ೩ ಗಂಟೆ ಹಾಳಾಯಿತಲ್ಲ ಅನ್ನೋದು ಅದಕ್ಕಿಂತ ಹೆಚ್ಚಿನ ಬೇಸರ!
ನಮ್ಮ ಕನ್ನಡ ಸಿನೆಮಾದವರು ಅದ್ಯಾಕೆ ಇಂಥ ಸಿನೆಮಾ ತಯಾರಿಸುತ್ತಾರೋ ನಾ ಕಾಣೆ. ಅಷ್ಟು ದುಡ್ಡು ಹೆಚ್ಚಾಗಿದ್ದರೆ ಬಡವರಿಗೆ ದಾನ ಮಾಡಿದ್ದರೆ ಅವರಾದರೂ ಈ ಪ್ರೊಡ್ಯೂಸರ್ ಗಳನ್ನು ಜೀವನ ಪೂರ್ತಿ ಸ್ಮರಿಸುತ್ತಿದ್ದರೇನೋ. ಸಿನೆಮಾ ನೋಡಿ ಪ್ರೇಕ್ಷಕರ ಬೈಗುಳಗಳಿಗಿಂತ! ಶ್ರೇಷ್ಟ ಕೆಲಸ ಮಾಡುದ ಪುಣ್ಯವಾದರೂ ಬರುತ್ತಿತ್ತು.
ದೇಶ ಭಕ್ತಿ, ಉಗ್ರಗಾಮಿಗಳ ಬಗ್ಗೆ ಅದೆಷ್ಟೋ ಸಿನೆಮಾಗಳು ಬಂದಿವೆ. ಆದರೆ ಇಂಥಾ ಸಿನೆಮಾ ಯಾವ ಭಾಷೆಯಲ್ಲೂ ಬಂದಿರಲಿಕ್ಕಿಲ್ಲವೇನೋ.
ಇತ್ತೀಚೆಗೆ ಬಂದ ಎ ವೆಡ್ನಸ್ಡೇ, ಮುಂಬೈ ಮೇರಿ ಜಾನ್ ಎಂತ ಅದ್ಭುತ ಸಿನೆಮಾಗಳು. ಕನ್ನಡದಲ್ಲಿ ಯಾಕೆ ಇಂಥಾ ಸಿನೆಮಾಗಳು ಬರುವುದಿಲ್ಲ?
ಒಂದೊಮ್ಮೆ ನಮ್ಮ ಕನ್ನಡದವರೇನಾದರೂ ಅಂಥದ್ದೇ ಸಿನಮಾ ತಯಾರಿಸಬೇಕೆಂದು ಹೊರಟರೆ ಹೇಗಿರುತ್ತಿತ್ತು? ಅನಗತ್ಯ ಹಾಡುಗಳು, ಹಾಡಿಗೋಸ್ಕರ ಕುಣಿತ, ಕುಣಿತಕ್ಕಾಗಿ ಲವ್ ಸ್ಟೋರಿ. ಒಟ್ಟಿನಲ್ಲಿ ಕಲಸು ಮೇಲೋಗರ!ಖಂಡಿತವಾಗಿಯೂ ಅಂತಹ ಉತ್ತಮ ಚಿತ್ರಗಳನ್ನು ತಯಾರಿಸಲು ಸಾಧ್ಯವಿಲ್ಲ!
ಕನ್ನಡ ಸಿನೆಮಾದವರು ಹಿಂದಿಯದ್ದನ್ನೇ ತಥಾವತ್ತಾಗಿ ಕೋಪಿ ಹೊಡೆಯಿರಿ ಎಂದು ಹೇಳುತ್ತಿಲ್ಲ. ನಮ್ಮ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ರವರ ಸಂಗೀತದಂತೆ! (ಹೀಗೆ ಬರೆದದ್ದು ಗೊತ್ತಾದರೆ ಗುರ್ ಅಂದಾರು.) ಕೋಪಿ ಹೊಡೆದರೂ ಗೊತ್ತಾಗದಂತಿರಬೇಕು.
ಇನ್ನಾದರೂ ನಮ್ಮ ಚಿತ್ರರಂಗದವರು ಪರಭಾಷಾ ಸಿನೆಮಾದ ಐಡಿಯಾಗಳನ್ನು ಸ್ವೀಕರಿಸಿ ಉತ್ತಮ ಸಿನೆಮಾ ತಯಾರಿಸಲಿ ಎಂಬುದೇ ನನ್ನ ವಿನಯಪೂರ್ವಕವಾದ ವಿನಂತಿ.
ಇನ್ನು ಸರ್ಕಸ್ ಸಿನೆಮಾದ ಕತೆಯನ್ನಂತೂ ಬರೆಯೋದಿಲ್ಲ. ಅದನ್ನ ನೋಡಿ ನನ್ನ ತಲೆಯಂತೂ ಹಾಳಾಗಿದೆ. ಇನ್ನು ನನ್ನ ಈ ಬರವಣಿಗೆಯಲ್ಲಿ ಕತೆ ಬರೆದು ನಿಮ್ಮ ತಲೆ ಹಾಳು ಮಾಡಿದ ಅಪವಾದ ನನಗೆ ಬರುವು ಇಷ್ಟವಿಲ್ಲ.
ಒಟ್ಟಿನಲ್ಲಿ ಗಣೇಶನನ್ನು ಮುಂದಿನ ಒಲಿಂಪಿಕ್ ಓಟಕ್ಕೆ ಈಗಲೇ ನಿರ್ದೇಶಕರು ತಯಾರುಗೊಳಿಸಿದಂತೆ ಕಾಣುತ್ತದೆ . ರೈಲಿನ ವೇಗಕ್ಕಿಂತ ಸ್ಪೀಡಿನಲ್ಲಿ! ಚಿನ್ನವೋ ಬೆಳ್ಳಿ ಪದಕವೋ ಬಂದರೆ ಅನುಮಾನವಿಲ್ಲ. ಆದ್ದರಿಂದ ಸಿನೆಮಾ ನಿರ್ದೇಶಕರಿಗೆ, ಪ್ರೊಡ್ಯೂಸರಿಗೆ ಹಾಗೂ ಗಣೇಶ್ ಗೆ ಆಲ್ ದಿ ಬೆಸ್ಟ...!!!






4 comments:

ಸಂದೀಪ್ ಕಾಮತ್ said...

ಚೆ ಅದಕ್ಕಿಂತ ವೆಂಕಟ ಇನ್ ಸಂಕಟ ನೋಡ್ಬಹುದಿತ್ತು .

ಅದು ಚೆನ್ನಾಗಿಲ್ಲ ಅಂದ್ರೆ ನಂಗೆ ಬಯ್ಬೇಡಿ ಮತ್ತೆ!

ಸಿಂಧು ಭಟ್. said...

ಖಂಡಿತ ನೋಡ್ತೀನಿ. ಚೆನ್ನಾಗಿದ್ರೂ ಇಲ್ಲದಿದ್ರೂ ನಿಮ್ಮನ್ನ ಬೈಯಲ್ಲ ಬಿಡಿ.

ವಿ.ರಾ.ಹೆ. said...

ಅಬ್ಬಾ, ನಾನು ಸದ್ಯ ನೋಡಲಿಲ್ಲ ಸರ್ಕಸ್. ಬಚಾವಾಗ್ಬಿಟ್ಟೆ!

ಆದ್ರೂ ನಾನು ಅಂದುಕೊಳ್ತಾ ಇರ್ತೀನಿ ಕನ್ನಡದಲ್ಲಿ ಅದೇ ಲವ್, ಹಾಡು, ಫೈಟಿಂಗ್ ಮಾದರಿಗಳನ್ನು ಬಿಟ್ಟು ಬೇರೆ ಚಿತ್ರಗಳ್ಯಾಕೆ ಬರೋಲ್ಲ ಅಂತ. ನಿರ್ಮಾಪಕರೇ ಹಾಗಾ ಅಥವಾ ಕನ್ನಡ ಪ್ರೇಕ್ಷಕರೇ ಹಾಗಾ? ಗೊತ್ತಿಲ್ಲ

ವಿನಾಯಕ ಭಟ್ಟ said...

ಸರ್ಕಸ್ ಸಿನಿಮಾ ನೋಡೋದೂ ಒಂದು ಸರ್ಕಸ್ ಅಂತೀರಾ?
ಅಂತಹ ಸರ್ಕಸ್ ನಿಂದ ನಾನು ಬಚಾವಾದೆ ನೋಡಿ.